ಕಾರ್ಕಳ, ಜು 26 (DaijiworldNews/PY): "ಹಿರಿಯರು ಹಾಗೂ ಎಲೆಯ ಮರೆಯ ಕಾಯಿಯಂತೆ ಇರುವ ಪ್ರತಿಭಾವಂತರನ್ನು ಗುರುತಿಸುವ ಕೆಲಸ ನಿರಂತರವಾಗಿ ನಡೆಯಬೇಕು. ನಾಡಿಗೆ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಹೊಸ ಕಲ್ಪನೆ ಶ್ಲಾಘನೀಯ" ಎಂದು ಕರ್ನಾಟಕ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಹೆರ್ಗದ ನಾರಾಯಣ ಆಚಾರ್ಯ ಅವರನ್ನು ಅವರ ನಿವಾಸದಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಮತ್ತು ಪತ್ರಕರ್ತರ ವೇದಿಕೆ ಸಂಯುಕ್ತವಾಗಿ ಆಯೋಜಿಸಿದ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ ಅವರು ಅಧ್ಯಕ್ಷತೆ ವಹಿಸಿದ್ದರು. ಗುಲಾಬಿ ನಾರಾಯಣ ಆಚಾರ್ಯ, ಉದ್ಯಮಿ ಫೆರಲಾಯ್ ಭಾಸ್ಕರ ಆಚಾರ್ಯ, ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಪರ್ಕಳ ಸುಬ್ರಾಯ ಆಚಾರ್ಯ, ಕಲಾವಿದ ಪಿ.ಎನ್.ಆಚಾರ್ಯ, ಪಂಚನಬೆಟ್ಟು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎ. ನರಸಿಂಹ ಪಂಚನಬೆಟ್ಟು, ಗೋಪಾಲಾಚಾರ್ಯ, ವೆಂಕಟ್ರಮಣ ಆಚಾರ್ಯ, ರಾಘವೇಂದ್ರ ಪ್ರಭು ಕರ್ವಾಲೊ, ನರಸಿಂಹ ಮೂರ್ತಿ ರಾವ್ ಸಹಿತ ಗಣ್ಯರು ಉಪಸ್ಥಿತರಿದ್ದು ಅಭಿನಂದಿಸಿದರು.
ಸಂಘಟಕ, ಸಮಿತಿಯ ರಾಜ್ಯಾಧ್ಯಕ್ಷ ಡಾ.ಶೇಖರ ಅಜೆಕಾರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಕಾರ್ಯಕಾರಣಿ ಸದಸ್ಯ ಸಂತೋಷ ಜೈನ್ ಎಣ್ಣೆಹೊಳೆ ವಂದಿಸಿದರು.