ಕಾರ್ಕಳ, ಜು.26 (DaijiworldNews/HR): ಸಮಾಜಮುಖಿಯಾದ ಸೇವೆಗಳು ಅವಶ್ಯಕ ಹಾಗೂ ಅರ್ಹರಿಗೆ ತಲುಪಿದಾಗ ಸಾರ್ಥಕತೆ ಕಂಡುಕೊಳ್ಳಲು ಸಾಧ್ಯ. ಲಯನ್ಸ್ ಕ್ಲಬ್ ಕಾರ್ಕಳ ಕಳೆದ 54 ವರ್ಷಗಳಲ್ಲಿ ಹಲವಾರು ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ಲಯನ್ಸ್ ಕ್ಲಬ್ನ ನಿಯೋಜಿತ ಅಧ್ಯಕ್ಷ ರಾಜೇಶ್ ಶೆಣೈ ಹೇಳಿದರು.
ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸಿದ ಕಾರ್ಕಳ ತಾಲೂಕಿನ ಪತ್ರಕರ್ತರಿಗೆ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಕಾರ್ಕಳ ಲಯನ್ಸ್ ಕ್ಲಬ್ ನ್ಯಾನಿಟೈಸರ್ ಮೆಷಿನ್, ತಾಲೂಕಿನಲ್ಲಿ ಕೊರೊನಾ ಪೀಡಿತರನ್ನು ಸಾಗಿಸುವ ವಾಹನಕ್ಕೆ ಸುಮಾರು 15 ಸಾವಿರ ಮೌಲ್ಯದ ಇಂಧನ ನೀಡಲಾಗಿದೆ ಎಂಬ ಮಾಹಿತಿಯನ್ನು ನೀಡಿದರು.
ಕಾರ್ಕಳ ಲಯನ್ಸ್ ಕ್ಲಬ್ನ ಹಿರಿಯ ಸದಸ್ಯರಾದ ಜ್ಯೋತಿ ಪೈ ಅವರ ನೆನಪಿನ ಲ್ಲಿ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಬಡ ಮಕ್ಕಳ ಶಾಲಾ ಶುಲ್ಕವನ್ನು ಶೇ.50ರಷ್ಟು ಭರಸಲಾಗುವುದು. ಅದಕ್ಕಾಗಿ ರೂ. ಒಂದು ಲಕ್ಷ ನಗದು ಮೀಸಲಿಡಲಾಗಿದೆ. ಮನೆ ಇಲ್ಲದ ಮುಡಾರಿನ ಶಶಿಕಲಾ ಎಂಬವರಿಗೆ ಮನೆ ನಿರ್ಮಿಸಿ ಕೊಡಲಾಗಿದೆ. ಪಿಯು.ವಿದ್ಯಾರ್ಥಿಗಳಿಗೆ ಆನ್ ಲೈನ್ ಕಲಿಕೆಗೆ ಅಗತ್ಯವಾಗಿ ಈಗಾಗಲೇ ಐದು ಕಂಪ್ಯೂಟರ್ ನೀಡಲಾಗಿದೆ. ಕನಿಷ್ಠ ಸೌಲಭ್ಯದಲ್ಲಿ ಬದುಕುತ್ತಿರುವ ಅಸಹಾಯಕರಿಗೆ ಮುಂದೆಯೂ ನೆರವು ನೀಡುವ ಸೇರಿದಂತೆ ಹಲವು ಯೋಜನೆಗಳನ್ನು ಲಯನ್ಸ್ ಕ್ಲಬ್ ಕಾರ್ಕಳವು ಹಮ್ಮಿಕೊಳ್ಳಲಿದೆ ಎಂದರು.
ನಿಯೋಜಿತ ಕಾರ್ಯದರ್ಶಿ ನಿತ್ಯಾನಂದ ಭಂಡಾರಿ, ಖಜಾಂಚಿ ಪ್ರಕಾಶ್ ಪಿಂಟೋ, ಸುಭಾಸ್ ಸುಭಾಸ್, ಚಂದ್ರಹಾಸ ಸುವರ್ಣ, ಪ್ರೊ.ಪದ್ಮನಾಭ ಗೌಡ ಮೊದಲಾದವರು ಉಪಸ್ಥಿತರಿದ್ದರು.