ಮಂಗಳೂರು, ಜು 26 (DaijiworldNews/PY): "ಸಿಎಂ ಬದಲಾವಣೆ ಬಗ್ಗೆ ನನಗೆ ಈವರೆಗೆ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಈ ಬಗ್ಗೆ ನಾನು ಹೆಚ್ಚು ಏನನ್ನೂ ಉಲ್ಲೇಖ ಮಾಡುವುದಿಲ್ಲ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, "ಮುಖ್ಯಮಂತ್ರಿಗಳು ಕಾದು ನೋಡಿ ಎಂದು ಯಾವ ಅರ್ಥ ಭಾವನೆಯಲ್ಲಿ ಹೇಳಿದ್ದಾರೆ ತಿಳಿದಿಲ್ಲ. ಇದನ್ನು ಯಾವ ಅರ್ಥದಲ್ಲಿ ಹೇಳಿದ್ದಾರೆ ಅನ್ನೋದು ನನ್ನ ಗಮನದಲ್ಲಿ ಇಲ್ಲ. ಸಿಎಂ ಅವರು ಎರಡು ವರ್ಷ ಅಧಿಕಾರ ಪೂರೈಸಿದ್ದು, ಉತ್ತಮ ಆಡಳಿತ ನೀಡಿದ್ದಾರೆ. ನೆರೆ, ಕೊರೊನಾ ಎಲ್ಲವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಆರ್ಥಿಕ ಹೊಡೆತದ ನಡುವೆಯೂ ಒಳ್ಳೆಯ ಯೋಜನೆಗಳು ಪ್ರಕಟವಾಗಿವೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ" ಎಂದಿದ್ದಾರೆ.
"ಯಡಿಯೂರಪ್ಪ ಅವರು ಒಬ್ಬ ಕಾರ್ಯರಿಗೆ ಆದರ್ಶಪಕ್ಷ ಹೇಳುವುದನ್ನು ಪಾಲಿಸುತ್ತೇನೆ ಎನ್ನುವ ಅವರು ನಮಗೆಲ್ಲಾ ಆದರ್ಶ ರಾಷ್ಟ್ರ ಹಾಗೂ ಪಕ್ಷದ ಮಾತಿಗೆ ಗೌರವ ನೀಡಿ ನಡೆದುಕೊಂಡು ಹೋಗುವುದು ಕಾರ್ಯಕರ್ತರಿಗೆ ಪ್ರೇರಣೆಯಾಗಿದೆ. ಈ ದೃಷ್ಟಿಯಿಂದ ಪಕ್ಷದ ಹೇಳಿದರೆ ಯಾವುದಕ್ಕೂ ಸಿದ್ಧ ಎಂದು ಹೇಳಿದ್ದಾರೆ. ಇದು ಯಡಿಯೂರಪ್ಪ ಅವರ ಮಾತು ಹಾಗೂ ನಮ್ಮ ಮಾತು ಕೂಡಾ ಇದೆ ಆಗಿದೆ. ಅಧಿವೇಶನದ ಹಿನ್ನೆಲೆ ನಾನು ನಾಳೆ ದೆಹಲಿಗೆ ತೆರಳುತ್ತಿದ್ದೇನೆ. ಎರಡು ವರ್ಷ ಅಧಿಕಾರ ಪೂರೈಸಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ" ಎಂದು ಹೇಳಿದ್ದಾರೆ.
ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರ ಜೊತೆ ನಳಿನ್ ಕುಮಾರ್ ಕಟೀಲ್ ಅವರು ಯೆನಪೋಯ ಆಸ್ಪತ್ರೆಗೆ ಭೇಟಿ ನೀಡಿದ್ದು, ಆಸ್ಕರ್ ಫೆರ್ನಾಂಡಿಸ್ ಅವರ ಆರೋಗ್ಯ ವಿಚಾರಿಸಿದರು. ಆಸ್ಕರ್ ಅವರನ್ನು ಕಂಡ ಬಳಿಕ ಅವರ ಕುಟುಂಬಿಕರೊಂದಿಗೆ ಮಾತನಾಡಿ ಧೈರ್ಯ ತುಂಬಿದ ನಳಿನ್, "ಆಸ್ಕರ್ ಅವರು ಓರ್ವ ರಾಜಕೀಯ ಮುತ್ಸದ್ದಿ. ಸಜ್ಜನಿಕೆಯ ರಾಜಕಾರಣಿ. ಹಿಂದಿಗಿಂತ ಇವತ್ತು ಅವರ ಆರೋಗ್ಯ ಸುಧಾರಿಸುತ್ತಿದೆ. ಅವರು ಶೀಘ್ರವೇ ಗುಣಮುಖರಾಗಿ ಹೊರಗೆ ಬರಲಿ ಎಂದು ಪ್ರಾರ್ಥಿಸುತ್ತೇನೆ. ರಾಜ್ಯಸಭೆಯಲ್ಲಿ ದೇಶಕ್ಕೆ ಅವರ ಮಾರ್ಗದರ್ಶನ ಸಿಗಲಿ. ವೈದ್ಯರೊಂದಿಗೂ ಮಾತನಾಡಿದ್ದೇನೆ. ಅವರ ಆರೋಗ್ಯ ಸುಧಾರಿಸುತ್ತಿದೆ" ಎಂದಿದ್ದಾರೆ.