ಉಡುಪಿ, ಜು.25 (DaijiworldNews/HR): "ಮುಖ್ಯಮಂತ್ರಿ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ಅದರ ಬಗ್ಗೆ ಮಾಹಿತಿ ಇಲ್ಲ. ಸದ್ಯ ಆಡಿಯೋ ವಿಚಾರ ತನಿಖೆ ಪ್ರಗತಿಯಲ್ಲಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಣಿಪಾಲ ಪರ್ಕಳದ ಸಣ್ಣಕ್ಕಿಬೆಟ್ಟುವಿನಲ್ಲಿ ಶಾಸಕ ರಘುಪತಿ ನೇತೃತ್ವದಲ್ಲಿ ಕೇದಾರೋತ್ಥಾನದ ಮೂಲಕ ನಡೆಸುತ್ತಿರುವ ಹಡಿಲು ಭೂಮಿ ಕೃಷಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಅವರು, ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆಗಳು ನಡೆಯುತ್ತಿದೆ. ಆದರೆ ಈ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ಮಾಹಿತಿ ಇಲ್ಲ. ಸದ್ಯ ಆಡಿಯೋ ವಿಚಾರ ತನಿಖೆ ಪ್ರಗತಿಯಲ್ಲಿದೆ" ಎಂದರು.
"ಬಿಜೆಪಿ ಸುದೀರ್ಘವಧಿಯಲ್ಲೆ ಅಧಿಕಾರಕ್ಕೆ ಬಂದಿಲ್ಲ. ಕಾಂಗ್ರೆಸ್ ಸುದೀರ್ಘವಧಿಯಲ್ಲಿ ಇತ್ತು. ವಾಜಪೇಯಿ ಕಾಲದಲ್ಲಿದ್ದಾಗ ಮುಸ್ಲಿಂ ಬಂದುವನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದರು. ಈಗ ಮೋದಿ ಯವರು ಪ್ರದಾನಿಯಾಗಿದ್ದಾರೆ, ದಲಿತ ಬಂದುವನ್ನು ರಾಷ್ಟ್ರಪತಿ ಮಾಡಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪನವರು ಗೋವಿಂದ ಖಾರಾಜೋಳರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದ್ದು, ಕೇಂದ್ರದಲ್ಲಿ ನಾರಾಯಣ ಸ್ವಾಮಿಯವರನ್ನು ಸಚಿವರನ್ನಾಗಿ ಮಾಡಿ ಬಿಜೆಪಿ ದಲಿತರಿಗೆ ನ್ಯಾಯ ಕೊಟ್ಟಿದೆ. ಹಾಗಾಗಿ ಬಿಜೆಪಿ ಏನು ಮಾಡಿದೆ ಎನ್ನುವುದನ್ನು ಬಿಟ್ಟು, ಆದರೆ ಕಾಂಗ್ರೆಸ್ ಏನು ಮಾಡಿದೆ ಅಂತ ಹೇಳಲಿ" ಎಂದಿದ್ದಾರೆ.
ಇನ್ನು ಮುಖ್ಯಮಂತ್ರಿ ಬದಲಾವಣೆ ವಿಚಾರ ಈಗ ಸಮಂಜಸವೇ ಎಂಬ ಪ್ರಶ್ನೆಗೆ ಉತ್ತರಿಸಿದ ಕಟೀಲ್, "ಎಲ್ಲಾ ಶಾಸಕರು ಸಚಿವರು ಅವರವರ ಕ್ಷೇತ್ರದಲ್ಲಿ ಇರುವಂತೆ ಸೂಚನೆ ನೀಡಿದ್ದಾರೆ. ಅವರವರ ಕ್ಷೇತ್ರದಲ್ಲಿ ನೆರೆ ಪರಿಹಾರ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಗಳು ಎರಡು ದಿನ ವೈಮಾನಿಕ ಸಮೀಕ್ಷೆಯಲ್ಲಿ ದ್ದಾರೆ. ಜನರಿಗೆ ಸಾಂತ್ವನ ನೀಡುತ್ತಿದ್ದಾರೆ" ಎಂದರು.
ರಾಜ್ಯದಲ್ಲಿ ದಲಿತ ಸಿಎಂ ಮಾಡುವ ವಿಚಾರದ ಕುರಿತು ಮಾತನಾಡಿದ ಅವರು,"ಸಿದ್ದರಾಮಯ್ಯನವರು ಏನೂಂತ ಇಡೀ ಕರ್ನಾಟಕ ಜನತೆಗೆ ಗೊತ್ತಿದೆ. ಅಹಿಂದವನ್ನು ಹೋರಾಟ ಮಾಡಿಕೊಂಡು ಬಂದವರು ಮುಖ್ಯಮಂತ್ರಿ ಆದರು, ಅದರಲ್ಲಿ ತಪ್ಪೇನಿದೆ. ಸಿಎಂ ಆದ ಮೇಲೆ ಅಹಿಂದ ಮರೆತು ಬಿಟ್ಟು ಹಿಂದುಳಿದ ವರ್ಗಗಳಿಗೆ ಏನು ಮಾಡಿದರು. ಮುಖ್ಯಮಂತ್ರಿ ಆಗಲು ರಾತ್ರಿ ಹಗಲು ಕೆಲಸಮಾಡಿದ ಪರಮೇಶ್ವರರನ್ನು ಸೋಲಿಸಿದರು. ಖರ್ಗೆಯನ್ನು ಸೋಲಿಸಿದ ಇತಿಹಾಸ ಇದೆ. ಈಗ ಅವರು ಆ ಹೆಸರು ಉಲ್ಲೇಖ ಮಾಡುವುದು ಎಷ್ಟು ಸರಿ?" ಎಂದು ಪ್ರಶ್ನಿಸಿದ್ದಾರೆ.