ಕಾರ್ಕಳ, ಜು.23 (DaijiworldNews/HR): ಶಿಕ್ಷಣ ಕ್ಷೇತ್ರದಲ್ಲಿ ಕಂಪ್ಯೂಟರ್ ಬಳಕೆ ಅವಶ್ಯಕವಾಗಿದ್ದು, ವಿದ್ಯಾರ್ಥಿಗಳು ತಮ್ಮ ಮುಂದಿನ ಔದ್ಯೋಗಿಕ ಉನ್ನತಿಗೆ ವಿವಿಧ ಕೌಶಲ್ಯದೊಂದಿಗೆ ಕಂಪ್ಯೂಟರ್ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದು ರೋಟರಿ ಜಿಲ್ಲಾ ಗವರ್ನರ್, ರೊ. ರಾಜಾರಾಮ್ ಭಟ್ ಹೇಳಿದರು.
ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಇಲಾಖೆ, ಕಾಗ್ನಿಝೆಂಟ್ ಕಂಪನಿ ಹಾಗೂ ರೋಟರಿ ಇಂಡಿಯಾದ ಮಹತ್ವಾಕಾಂಕ್ಷಿ ಯೋಜನೆಯಾದ ಹೆಲ್ಪ್ ಎಡ್ಯುಕೇಟ್ ಕಾರ್ಯಕ್ರಮದಡಿಯಲ್ಲಿ ಮುಂಜುನಾಥ ಪೈ ಪದವಿ ಕಾಲೇಜಿಗೆ ಕಾಗ್ಮಿಝೆಂಟ್ ನೀಡಿದ 20 ಕಂಪ್ಯೂಟರ್ ಗಳನ್ನು ಹಸ್ತಾಂತರಿಸಿ ಮಾತನಾಡಿದ ಅವರು, "ರೋಟರಿ ಸಂಸ್ಥೆಯು ರಾಜ್ಯಾದ್ಯಂತ ಉಚಿತ ಕಂಪ್ಯೂಟರ್ಗಳನ್ನು ಸರಬರಾಜು ಮಾಡಿ ಗ್ರಾಮೀಣ ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು" ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ರೊಟರಿ ಸಂಸ್ಥೆಯ ರೊ. ಸುಭ್ರಹ್ಮಣ್ಯ ಬಾಯರಿಯವರು ಯೋಜನೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಬಳಿಕ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ರೋಟರಿ ಸಂಸ್ಥೆಗಳು ನೀಡುತ್ತಿರುವ ಸಹಾಯ ಹಾಗೂ ಸಹಕಾರದ ಕುರಿತು ಮಾತನಾಡಿದರು.
ಇನ್ನೋರ್ವ ಅತಿಥಿ ರೋಟರಿ ಕ್ಲಬ್ ಉಡುಪಿ ಯ ರೊ. ಲಕ್ಷ್ಮೀನಾರಾಯಣರವರು ತಾಂತ್ರಿಕ ಸಲಹೆ ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದ ಕಾಲೇಜಿನ ಪ್ರಾಂಶುಪಾ ಪ್ರೊ. ಶ್ರೀವರ್ಮ ಅಜ್ರಿ ಎಂ. ಮಾತನಾಡಿ, "ಕಾಲೇಜಿಗೆ ಕಂಪ್ಯೂಟರ್ಗಳನ್ನು ಉಚಿತವಾಗಿ ನೀಡಿದಕ್ಕಾಗಿ ಝೆಂಟ್ ಕಂಪನಿ ಹಾಗೂ ಯೋಜನೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ರೋಟರಿ ಸಂಸ್ಥೆಗಳಿಗೂ ಅಭಿನಂದಿಸಿ ಸರಕಾರಿ ಕಾಲೇಜುಗಳ ಅವಶ್ಯಕತೆ ಪೂರೈಸುವಲ್ಲಿ ಇಂತಹ ಕಾರ್ಯಕ್ರಮಗಳು ಉಪಯುಕ್ತವಾಗಲಿವೆ" ಎಂದರು.
ಸ್ನಾತಕೊತ್ತರ ವಿಭಾಗದ ಸಂಯೋಜಕ ವಿದ್ಯಾಧರ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.