ಬೆಳ್ತಂಗಡಿ, ಜು 23 (DaijiworldNews/PY): ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ದನವನ್ನು ಯುವಕರು ರಕ್ಷಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ.
ಜಯರಾಜ್ ಶೆಟ್ಟಿ ಎಂಬವರಿಗೆ ಸೇರಿದ ದನ ಮೇಯಲು ಹೋಗಿದ್ದ ಸಂದರ್ಭ ನೆರೆ ನೀರಿನಲ್ಲಿ ಸಿಲುಕಿದ್ದು, ಕೊಚ್ಚಿಕೊಂಡು ಹೋಗುವ ಸ್ಥಿತಿಯಲ್ಲಿತ್ತು. ಈ ವಿಚಾರ ತಿಳಿದ ಪರಿಣತ ಈಜುಗಾರರಾದ ಇಮ್ತಿಯಾಝ್ ಹಾಗೂ ಹಸನಬ್ಬ ಕೈರೋಳಿ ಎಂಬವರು ಜೀವದ ಹಂಗು ತೊರೆದು ದನವನ್ನು ರಕ್ಷಿಸಿದ್ದಾರೆ.
ಮೇಯಲು ಹೋಗಿದ್ದ ದನ ನೀರು ಹೆಚ್ಚಾದ ಕಾರಣ ಪಲ್ಗುಣಿ ನದಿಯ ಮಧ್ಯೆ ಸಿಲುಕಿಕೊಂಡಿತ್ತು. ಅಲ್ಲದೇ, ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಸ್ಥಿತಿಯಲ್ಲಿತ್ತು. ಈ ವೇಳೆ ಇಮ್ತಿಯಾಝ್ ಹಾಗೂ ಹಸನಬ್ಬ ಕೈರೋಳಿ ಅವರು ತುಂಬಿ ಹರಿಯುತ್ತಿದ್ದ ನೀರಿನಲ್ಲಿ ಈಜುತ್ತಾ ಹೋಗಿ ದನವನ್ನು ರಕ್ಷಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.