ಉಡುಪಿ, ಜು 23 (DaijiworldNews/MS): ಉಡುಪಿಯ ಪೆರ್ಣಂಕಿಲ ಗ್ರಾಮಸ್ಥರಲ್ಲಿ ಕಳೆದ ಒಂದು ತಿಂಗಳಿಂದ ಆತಂಕ ಹುಟ್ಟಿಸಿ ಭಯಕ್ಕೆ ಕಾರಣವಾದ ಚಿರತೆ ಸೆರೆಯಾಗಿದೆ.
ಪೆರ್ಣಂಕಿಲ ಭಾಗದಲ್ಲಿ ಚಿರತೆಗಳ ಓಡಾಟದ ಬಗ್ಗೆ ಈ ಹಿಂದೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಗುಂಡುಪಾದೆಯ ಆಶೋಕ್ ನಾಯಕ್ ಎಂಬವರ ತೋಟದಲ್ಲಿ ಅರಣ್ಯ ಇಲಾಖೆ ಬೋನು ಇರಿಸಿತ್ತು. ಅರಣ್ಯ ಇಲಾಖೆಯಿಂದ ಚಿರತೆ ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಿದ್ದು ಬೋನಿಗೆ ಬಿದ್ದಿದೆ.
ಇನ್ನು ಇದು ಪೆರ್ಣಂಕಿಲ ಗ್ರಾಮದಲ್ಲಿ ಹಿಡಿದ ಮೂರನೇ ಚಿರತೆಯಾಗಿದ್ದು, ಕಳೆದ 11 ವರ್ಷಗಳಿಂದ ಈ ಹಿರಿಯಡ್ಕ ಭಾಗದಲ್ಲಿ ಚಿರತೆ ಹಾವಳಿ ಜೋರಾಗಿದ್ದು ಅನೇಕ ಬಾರಿ ಗ್ರಾಮಸ್ಥರು ಅದನ್ನು ಹಿಡಿಯುವಂತೆ ಅರಣ್ಯ ಇಲಾಖೆಯ ಮೊರೆ ಹೋಗಿದ್ದರು. ಈ ಗ್ರಾಮದಲ್ಲಿ ಶಾಲೆಗೆ ಹೋಗುವ ಮಕ್ಕಳಿಗೂ ಅನೇಕ ಬಾರಿ ಚಿರತೆ ಕಾಣ ಸಿಕ್ಕಿತ್ತು.
ಕೊನೆಗೂ ಅರಣ್ಯ ಇಲಾಖೆಯವರ ಬೋನಿಗೆ ಚಿರತೆ ಸಿಕ್ಕಿ ಬಿದ್ದಿದ್ದು ಗ್ರಾಮಸ್ಥರು ನಿರಾಳ ವ್ಯಕ್ತಪಡಿಸಿದ್ದಾರೆ.