ಮಂಗಳೂರು, ಜು 23 (DaijiworldNews/PY): "ಕಾಂಗ್ರೆಸ್ಗೆ ಬರೋರಿದ್ರೆ ಅರ್ಜಿ ಸಲ್ಲಿಸಲಿ. ಆ ಮೇಲೆ ಕೂತು ಮಾತನಾಡೋಣ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಉತ್ತಮ ಸರ್ಕಾರ ಕೊಡಲು ಆಗದ ಕಾರಣ ಸಿಎಂ ಬದಲಾವಣೆ ಆಗುತ್ತಿದೆ. ಎರಡು ವರ್ಷದಲ್ಲಿ ಡಬಲ್ ಎಂಜಿನ್ ಸರ್ಕಾರ ಇಟ್ಟುಕೊಂಡು ಒಳ್ಳೆ ಆಡಳಿತ ಕೊಡಲು ಆಗಿಲ್ಲ. ಆಡಳಿತ ಸರಿ ಇಲ್ಲ" ಎಂದಿದ್ದಾರೆ.
"ನಾನು ಬಹಳ ಹಿಂದೆ 26ಕ್ಕೆ ಮಾತನಾಡುವ ಎಂದಿದ್ದೆ. ರಾಜ್ಯದಲ್ಲಿ ಒಳ್ಳೆ ಸರ್ಕಾರ ಕೊಡೊಕೆ ಆಗಿಲ್ಲ. ಹಾಗಾಗಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಇದ್ದರೂ ಒಳ್ಳೆ ಆಡಳಿತ ಕೊಡಲು ಆಗಿಲ್ಲ. ಈ ಸರ್ಕಾರಕ್ಕೆ ಗೌರ ಎಲ್ಲಿದೆ. ಅವರಲ್ಲಿ ಎಷ್ಟೇ ಮುಖ್ಯಮಂತ್ರಿ ಬದಲಾವಣೆ ಆದರೂ ಕೂಡಾ ಪಕ್ಷದ ಬಗ್ಗೆ ಮಾತನಾಡುವುದಿಲ್ಲ. ಆದರೆ, ಆಡಳಿತ ವ್ಯವಸ್ಥೆಯ ಕಥೆ ಏನು? ಯಾವ ಅಧಿಕಾರಿಗಳು ಅವರ ಮಾತುಗಳನ್ನು ಕೇಳುತ್ತಾರೆ" ಎಂದು ಹೇಳಿದ್ದಾರೆ.
"ಅಧಿಕಾರಿಗಳಿಂದ ಹಿಡಿದು ಗ್ರಾ.ಪಂ., ವಿಧಾನಸೌಧದವರೆಗೆ ಯಾರೂ ಅವರ ಮಾತನ್ನು ಕೇಳುತ್ತಿಲ್ಲ. ಈಗ ತುರಾತುರಿಯಲ್ಲಿ ಅನುದಾ ಬಿಡುಗಡೆಯಾಗಿತ್ತಿದೆ. ತುರಾತುರಿಯಲ್ಲಿ ಎಲ್ಲಾ ಫೈಲ್ಗಳಿಗೆ ಸಹಿ ಆಗುತ್ತಿದೆ. ಅದರಲ್ಲೂ ನೀರಾವರಿ ಇಲಾಖೆಯ ಎಷ್ಟು ಫೈಲ್ ಕ್ಲಿಯರ್ ಆಗುತ್ತಿದೆ. ಬಜೆಟ್ನಲ್ಲಿ ಎಷ್ಟು ಹಣ ಇಟ್ಟಿದ್ರಿ? ಈಗ ಎಷ್ಟು ಕ್ಲಿಯರ್ ಆಗುತ್ತಿದೆ? ಎರಡು ವರ್ಷದಿಂದ ಎಷ್ಟು ಕ್ಲಿಯರ್ ಆಗಿದೆ? ಈ ಬಗ್ಗೆ ಅಸೆಂಬ್ಲಿಯಲ್ಲಿ ದಾಖಲೆ ಸಮೇತ ನಾನು ಮಾತನಾಡುತ್ತೇನೆ" ಎಂದು ತಿಳಿಸಿದ್ದಾರೆ.
"ಹಣಕಾಸಿ ಇಲಾಖೆ ದುಡ್ಡಿಲ್ಲ ಎಂದು ಪ್ರಾಜೆಕ್ಟ್ ಕ್ಲಿಯರ್ ಆಗುತ್ತಿರಲಿಲ್ಲ. ಈಗ ಎಲ್ಲಿಂದ ದುಡ್ಡು ಬಂತು? ಇವೆಲ್ಲಾ ಕೂಡಾ ದೊಡ್ಡ ಚರ್ಚೆಯಾಗಬೇಕು. ಈ ಬಗ್ಗೆ ನಾನು ಚರ್ಚೆ ಮಾಡುತ್ತೇನೆ" ಎಂದಿದ್ದಾರೆ.
"ಕಾಂಗ್ರೆಸ್ಗೆ ಯಾರಾದರೂ ಬರೋರಿದ್ರೆ ಅರ್ಜಿ ಸಲ್ಲಿಸಲಿ. ಆ ಮೇಲೆ ಕೂತು ಮಾತನಾಡೋಣ. ಈಗ ಇದರ ಬಗ್ಗೆ ಸುಮ್ಮನೆ ಮಾತನಾಡುವುದಿಲ್ಲ. ಕಾಂಗ್ರೆಸ್ ಪಾರ್ಟಿಗೆ ಬರಬೇಕು ಎಂದು ಇಷ್ಟ ಇರುವವರು ಬಹಳಷ್ಟು ಮಂದಿ ಇದ್ದಾರೆ. ಅವರ ಹೆಸರು ಹೇಳೊದಕ್ಕೆ ಹೋಗಲ್ಲ. ಹೋದವರು, ಇರುವವರು ಹಾಗೂ ಬರುತ್ತಾರೆ ಅನ್ನೋದಲ್ಲ. ಯಾವುದೇ ಇದ್ದರೂ ಪಕ್ಷದ ಕಾನೂನಿನಡಿ ತೀರ್ಮಾನ ಕೈಗೊಳ್ಳುತ್ತೇವೆ" ಎಂದು ಹೇಳಿದ್ದಾರೆ.
"ಮಠಾಧೀಶರು ಅವರ ಅಭಿಪ್ರಾಯ ಹೇಳುತ್ತಿದ್ದಾರೆ, ಬಿಜೆಪಿಗೆ ಓಟ್ ಹಾಕಿಲ್ಲ. ಯಡಿಯೂರಪ್ಪನವರಿಗೆ ಅಂತ. ಹಾಗಾಗಿ ನಾನು ಅವರ ನಡೆಯನ್ನು ತಪ್ಪು ಎಂದು ಹೇಳಲ್ಲ. ಚುನಾವಣೆ ಸಂದರ್ಭ ಹೋಗಿ ಮಾತನಾಡಿಸಿದ್ದಕ್ಕೆ ಮಠಾಧೀಶರು ಬಂದಿದ್ದಾರೆ. ನೀವೆಲ್ಲಾ ಹೋಗಿಲ್ಲ ಅಂದಿದ್ದರೆ ಹೇಗೆ ಬರುತ್ತಿದ್ದರು?" ಎಂದು ಪ್ರಶ್ನಿಸಿದ್ದಾರೆ.