ಮಂಗಳೂರು, ಜು.23 (DaijiworldNews/HR): "ಸಿದ್ದರಾಮಯ್ಯ ದಲಿತರನ್ನ ಸಿಎಂ ಮಾಡಲಿ ಎಂದು ನಳಿನ್ ಕುಮಾರ್ ಕಟೀಲ್ ನನಗೆ ಹೇಳಿದ್ದರು, ಆದರೆ ಈಗ ಆ ಅವಕಾಶ ಅವರಿಗಿದೆ ಸಾಮಾಜಿಕ ನ್ಯಾಯ ಇದೆ ಎಂದು ಹೇಳುವ ಅವರು ತಕ್ಷಣ ದಲಿತರನ್ನ ಸಿಎಂ ಮಾಡಲಿ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸವಾಲೆಸೆದಿದ್ದಾರೆ.
ಈ ಕುರಿತು ಸುದ್ದಿಗಾರೊಂದಿಗೆ ಮಾತನಾಡಿದ ಅವರು, "ಬಿಜೆಪಿಗೆ ಜನಗಳ ಬಗ್ಗೆ ಸ್ವಲ್ಪನು ಕಾಳಜಿ ಇಲ್ಲ, ಹಿಂದೆಯೂ ಇರಲಿಲ್ಲ, ಈಗ ಬರೋಕೂ ಸಾದ್ಯವಿಲ್ಲ. 2019ರಲ್ಲಿ ಬಂದ ಪ್ರವಾಹದ ಪರಿಹಾರವನ್ನೇ ಯಡಿಯೂರಪ್ಪ ಇನ್ನೂ ಕೊಟ್ಟಿಲ್ಲ. ಈ ಬಾರಿ ಕೂಡ ಮಳೆ ಬಂದು ಜನ ಕೊಚ್ಚಿ ಹೋಗಿದ್ದಾರೆ, ಮನೆಗಳು ಬಿದ್ದಿವೆ. ಆದರೆ ಸರ್ಕಾರ ಯುದ್ದೋಪಾದಿಯಲ್ಲಿ ಕೆಲಸ ಮಾಡೋ ಬದಲು ಸಿಎಂ ಬದಲಾವಣೆಯಲ್ಲಿದ್ದಾರೆ" ಎಂದು ಕಿಡಿಕಾರಿದ್ದಾರೆ.
"ಮುಖ್ಯಮಂತ್ರಿ ಸ್ಥಾನದಿಂದ ಈಗ ಯಡಿಯೂರಪ್ಪರನ್ನು ಬದಲಾವಣೆ ಮಾಡುತ್ತಾರೆ. ಆದರೆ ಬರೋನು ಕೂಡ ಭ್ರಷ್ಟನೇ ಆಗಿರ್ತಾನೆ. ಯಾವುದೇ ಮಠಾಧೀಶರು ರಾಜಕಾರಣಕ್ಕೆ ಕೈ ಹಾಕಬಾರದು ಯಾಕೆಂದರೆ ಇಲ್ಲಿ ಜನಾಭಿಪ್ರಾಯ ಬಹಳ ಮುಖ್ಯ, ಪಕ್ಷದ ಒಳಗಿನ ವಿಚಾರದಲ್ಲಿ ಯಾರೂ ಕೈ ಹಾಕಬಾರದು" ಎಂದಿದ್ದಾರೆ.
ಇನ್ನು ವಲಸಿಗ ಸಚಿವರನ್ನು ಮತ್ತೆ ಕಾಂಗ್ರೆಸ್ಗೆ ಪಡೆದುಕೊಳ್ಳೋ ವಿಚಾರದ ಕುರಿತು ಮಾತನಾಡಿದ ಅವರು, "ವಲಸಿರು ಬರ್ತಾರೆ ಅನ್ನೋದು ನನಗಂತೂ ಗೊತ್ತಿಲ್ಲ. ನಾನು ಸದನದಲ್ಲೇ ಅವರನ್ನ ವಾಪಾಸ್ ತೆಗೆದುಕೊಳ್ಳಲ್ಲ ಎಂದು ಹೇಳಿದ್ದೆ, ಯಾವುದೇ ಕಾರಣಕ್ಕೂ ಅವರನ್ನು ವಾಪಾಸ್ ತೆಗೊಳೋದಿಲ್ಲ ಅನ್ನೋದಕ್ಕೆ ಬದ್ದವಾಗಿದ್ದೇನೆ" ಎಂದರು.
"ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿಯವರು ಎಲ್ಲರೂ ಒಟ್ಟಾಗಿ ಭ್ರಷ್ಟ ಬಿಜೆಪಿ ಸರ್ಕಾರ ಬದಲಾಯಿಸಿ ಎಂದಿದ್ದರು. ನಾನು ತಿಂಗಳ ಹಿಂದೆಯೇ ಯಡಿಯೂರಪ್ಪ ಬದಲಾಗ್ತಾರೆ ಅಂದಿದ್ದೆ. ಈ ಬಗ್ಗೆ ನನಗೆ ಹೈಕಮಾಂಡ್ ಮೂಲದ ಮಾಹಿತಿ ಇತ್ತು, ಆದರೆ ಯಾರು ಬರ್ತಾರೆ ಅನ್ನೋ ಮಾಹಿತಿಯಿಲ್ಲ" ಎಂದು ಹೇಳಿದ್ದಾರೆ.