ಕಾಸರಗೋಡು, ಜು 23 (DaijiworldNews/MS): ಮನೆಯಲ್ಲಿ ಮಲಗಿದ್ದ ವ್ಯಕ್ತಿಯೋರ್ವನನ್ನು ಕೊಲೆಗೈದ ಘಟನೆ ಚಂದೇರ ಬುಧವಾರ ರಾತ್ರಿ ನಡೆದಿದ್ದು , ಕೃತ್ಯಕ್ಕೆ ಸಂಬಂಧಪಟ್ಟಂತೆ ಪತ್ನಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಕುಞಂಬು, ಪತ್ನಿ ಜಾನಕಿ
ವಿ.ರಾಜೇಶ್, ಅನಿಲ್
ಚಂದೇರ ಠಾಣಾ ವ್ಯಾಪ್ತಿಯ ಪಿಲಿಕ್ಕೋಡು ಮಡಿವಯಲ್ ಎಂಬಲ್ಲಿ ಘಟನೆ ನಡೆದಿದೆ . ಮಡಿವಯಲ್ ನ ಕುಞಂಬು (66) ಕೊಲೆಗೀಡಾದವರು. ಪತ್ನಿ ಜಾನಕಿ, ಸಂಬಂಧಿಕರಾದ ವಿ.ರಾಜೇಶ್, ಅನಿಲ್ ಬಂಧಿಸಲಾಗಿದೆ. ವಶಕ್ಕೆ ತೆಗೆದುಕೊಂಡ ಪೊಲೀಸರು ವಿಚಾರಣೆ ನಡೆಸಿದ ಬಳಿಕ ಗುರುವಾರ ರಾತ್ರಿ ಮೂವರನ್ನು ಬಂಧಿಸಿದ್ದಾರೆ.
ಕೋವಿಡ್ ಸೋಂಕಿಗೆ ಒಳಗಾಗಿದ್ದ ಕುಞಂಬು ಪಾಶ್ಚವಾಯುಗೆ ಒಳಗಾಗಿದ್ದು, ಹಾಸಿಗೆ ಹಿಡಿದ್ದರು. ಇವರ ಆರೈಕೆ ಮಾಡಲು ಸಾಧ್ಯ ಇಲ್ಲ ಎಂಬ ಕಾರಣಕ್ಕೆ ಬುಧವಾರ ತಡರಾತ್ರಿ ಕೊಲೆ ನಡೆಸಿರುವುದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ.
ಬುಧವಾರ ರಾತ್ರಿ ಅಂಬ್ಯುಲೆನ್ಸ್ ಚಾಲಕರೋರ್ವರಿಗೆ ಅನಾಮಧೇಯ ಕರೆ ಬಂದಿದ್ದು, ಮಡಿವಯಲ್ ನ ವ್ಯಕ್ತಿಯೋರ್ವರು ಗಂಭೀರ ಸ್ಥಿತಿಯಲ್ಲಿದ್ದು ಆಸ್ಪತ್ರೆಗೆ ತಲಪಿಸುವಂತೆ ತಿಳಿಸಿದ್ದನು . ಮರಳಿ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಇದರಿಂದ ಸಂಶಯಗೊಂಡ ಅಂಬ್ಯುಲೆನ್ಸ್ ಚಾಲಕ ಸ್ಥಳೀಯ ನಿವಾಸಿಗಳಿಗೆ ಮಾಹಿತಿ ನೀಡಿದ್ದು , ಪರಿಸರವಾಸಿಗಳು ಮನೆಗೆ ಬಂದು ನೋಡಿದಾಗ ಕುಞಂಬು ಮೃತಪಟ್ಟಿರುವುದು ಗಮನಕ್ಕೆ ಬಂದಿದೆ . ಕುತ್ತಿಗೆಯಲ್ಲಿ ಗಾಯ ಕಂಡುಬಂದಿದ್ದು , ನೆಲದಲ್ಲಿ ಬಿದ್ದಿದ್ದ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿರುವುದು ಕಂಡು ಬಂದಿದೆ. ಸಂಶಯಗೊಂಡು ಪತ್ನಿ ಜಾನಕಿಯನ್ನು ಪ್ರಶ್ನಿಸಿದಾಗ ಮಂಚದಿಂದ ಬಿದ್ದು ಗಾಯವಾಗಿರುವುದಾಗಿ ತಿಳಿಸಿದ್ದಳು .ಇದರಿಂದ ಚಂದೇರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು , ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದು , ಮೃತದೇಹವನ್ನು ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಕತ್ತು ಹಿಸುಕಿ ಕೊಲೆ ನಡೆಸಿರುವುದು ಪರೀಕ್ಷೆಯಿಂದ ಬೆಳಕಿಗೆ ಬಂದಿದೆ.
ರಾತ್ರಿ ಇಬ್ಬರು ಮನೆಗೆ ಆಗಮಿಸಿರುವ ಬಗ್ಗೆಯೂ ಪೊಲೀಸರಿಗ ,ಮಾಹಿತಿ ಲಭಿಸಿದ್ದು, ಈ ಹಿನ್ನಲೆಯಲ್ಲಿ ಪತ್ನಿ ಜಾನಕಿ ಹಾಗೂ ಇತರ ಇಬ್ಬರು ಸಂಬಂಧಿಕರನ್ನು ವಶಕ್ಕೆ ತೆಗೆದು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ .