ಕಾರ್ಕಳ, ಜು.22 (DaijiworldNews/HR): ಮಾನವೀಯ ಮೌಲ್ಯಗಳನ್ನು ಜನರ ಮನದಲ್ಲಿ ಉದ್ಧೀಪನಗೊಳಿಸುವ ಸದುದ್ಧೇಶದೊಂದಿಗೆ ಬೀದರ್ ಜಿಲ್ಲೆಯ ಔರಾದ್ನ ಗಡಿ ಗ್ರಾಮದಿಂದ 2020ರ ನವೆಂಬರ್ ಒಂದರಂದು ಜ್ಞಾನಭಿಕ್ಷಾ ಪಾದಯಾತ್ರೆ ಆರಂಭಿಸಿದ ಬೆಂಗಳೂರಿನ ಲೇಖಕ, ಚಿಂತಕ ವಿವೇಕಾನಂದ ಎಚ್. ಕೆ. ಅವರು 262 ದಿನದಲ್ಲಿ 8000 ಸಾವಿರ ಕಿಲೋಮೀಟರ್ ಕ್ರಮಿಸಿ 19ನೇ ಜಿಲ್ಲೆಯಾದ ಉಡುಪಿ ಜಿಲ್ಲೆಗೆ ಪ್ರವೇಶಿಸಿದಾಗ ಕಾರ್ಕಳದಲ್ಲಿ ಸಮಾನ ಮನಸ್ಕರಿಂದ ಅವರಿಗೆ ಪ್ರೀತಿಪೂರ್ವಕ ಸ್ವಾಗತಿಸಿದರು.
ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ, ಜನರ ಜೀವನ ಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿ ಎಂಬ ಘೋಷಣೆಯೊಂದಿಗೆ ಪಾದಯಾತ್ರೆ ನಡೆಸುತ್ತಿರುವ ಇಂಜಿನಿಯರ್ ವಿವೇಕಾನಂದ ಅವರು, ಸೋಮವಾರ ಬೆಳಗ್ಗೆ ಶೃಂಗೇರಿ ತಾಲೂಕಿನ ಕೆರೆಕಟ್ಟೆಯಿಂದ ಎಸ್. ಕೆ. ಬಾರ್ಡರ್, ಬಜಗೋಳಿ ಆಗಿ ಕಾರ್ಕಳಕ್ಕೆ ಆಗಮಿಸಿದ್ದರು.
ಕಾರ್ಕಳದ ಗೊಮ್ಮಟೇಶ್ವರ ಬೆಟ್ಟದ ಬಳಿ ಕಾರ್ಕಳದ ಮಹಾಜನತೆಯ ಪರವಾಗಿ ಪುರಸಭಾ ಸದಸ್ಯ ಶುಭದ್ ರಾವ್, ಪತ್ರಕರ್ತ ಮುಹಮ್ಮದ್ ಶರೀಫ್, ಎಣ್ಣೆಹೊಳೆ ರಾಧಾ ನಾಯಕ್ ಪ್ರೌಢಶಾಲೆಯ ಶಿಕ್ಷಕರಾದ ರಾಜಾರಾಮ್ ಶೆಟ್ಟಿ, ಶಂಕರ್, ಸತೀಶ್, ಚೇತನ್ ರಾವ್ ಮೊದಲಾದವರು ಶಾಲು ಹೊದೆಸಿ ಹಾರ ಹಾಕಿ ವಿವೇಕಾನಂದ ಎಚ್. ಕೆ ಅವರನ್ನು ಗೌರವಿಸಿ ಸ್ವಾಗತಿಸಿದರು.
ಪುರಸಭಾ ಬ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಸಿದ ವಿವೇಕಾನಂದರು, ಗೊಮ್ಮಟೇಶ್ವರ ಬೆಟ್ಟವನ್ನು ಸಂದರ್ಶಿಸಿದ ಬಳಿಕ ಕಾರ್ಕಳದಲ್ಲಿ ವಾಸ್ತವ್ಯ ಹೂಡಿದರು. ಮಂಗಳವಾರ ಬೆಳಗ್ಗೆ ಕಾರ್ಕಳದಿಂದ ಹೆಬ್ರಿ ಕಡೆಗೆ ಪಾದಯಾತ್ರೆ ಮುಂದುವರಿಸಿದ ಅವರು, ಬಳಿಕ ಕುಂದಾಪುರ, ಉಡುಪಿ, ಮುಂಗಳೂರು ಆಗಿ ಮುಂದುವರಿದು ಚಾಮರಾಜನಗರದ ಗಡಿಗ್ರಾಮದಲ್ಲಿ ಸಮಾಪನಗೊಳಿಸಲಿದ್ದಾರೆ.