ಮಂಗಳೂರು, ಜು.22 (DaijiworldNews/HR): ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಅವರು ಯೋಗಭ್ಯಾಸದ ಸಂದರ್ಭ ಬಿದ್ದು ತಲೆಗೆ ಏಟಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಕರ್ ಆರೋಗ್ಯ ವಿಚಾರಣೆಗೆ ಯಾರೂ ಆಸ್ಪತ್ರೆಗೆ ಬರಬೇಡಿ ಎಂದು ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಮಾತನಾದಿದ ಅವರು, "ಆಸ್ಕರ್ ಆರೋಗ್ಯ ವಿಚಾರಣೆ ಮಾಡಲು ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಸಾವಿರಾರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ಆಸ್ಕರ್ ಅವರ ಆರೋಗ್ಯಕ್ಕೆ ತೊಂದರೆಯಾಗುತ್ತಿದ್ದು, ಅವರ ವೈದ್ಯಕೀಯ ಚಿಕಿತ್ಸೆಗೂ ತೊಂದರೆಗಳು ಉಂಟಾಗುತ್ತಿದೆ. ಜೊತೆಗೆ ಕೊರೊನಾ ಹಿನ್ನಲೆಯಲ್ಲೂ ಆಸ್ಪತ್ರೆಗೆ ಸಾವಿರಾರು ಮಂದಿ ಆಗಮಿಸುವುದು ಸರಿಯಲ್ಲ" ಎಂದಿದ್ದಾರೆ.
ಇನ್ನು "ವೈದ್ಯರು ಕೂಡ ಸಲಹೆ ನೀಡಿದ್ದು, ಅಭಿಮಾನಿಗಳು ಇದ್ದಲ್ಲಿಯೇ ಆಸ್ಕರ್ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ" ಎಂದು ಮನವಿ ಮಾಡಿಕೊಂಡಿದ್ದಾರೆ.
ಆಸ್ಕರ್ ಫೆರ್ನಾಂಡೀಸ್ ಅವರಿಗೆ ಗಂಭೀರ ಸ್ಥಿತಿಯಲ್ಲಿರುವಾಗ ಡಯಾಲಿಸಿಸ್ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಬುಧವಾರ ಅವರ ಕೈಯಲ್ಲಿ ಚಲನೆ ಕಂಡು ಬಂದಿದ್ದು, ವೈದ್ಯರು ಅವರಿಗೆ ಡಯಾಲಿಸಿಸ್ ಮಾಡಲು ಮುಂದಾಗಿದ್ದಾರೆ. ಅದರಂತೆ ಬುಧವಾರ ಒಂದು ಹಂತದ ಡಯಾಲಿಸಿಸ್ ನಡೆದಿದ್ದು, ಡಯಾಲಿಸಿಸ್ ಚಿಕಿತ್ಸೆ ಪೂರ್ಣಗೊಂಡ ನಂತರವೇ ಸರ್ಜರಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇನ್ನು ಹಿರಿಯ ನಾಯಕರಾದ ದಿಗ್ವಿಜಯ ಸಿಂಗ್, ಅಶೋಕ್ ಗೆಹ್ಲೋಟ್ ಅವರು ಆಸ್ಕರ್ ಕುಟುಂಬಕ್ಕೆ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ ಎನ್ನಲಾಗಿದೆ.