ಮಂಗಳೂರು,ಜು 20 (DaijiworldNews/MS): ಕಾಂಗ್ರೆಸ್ನ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಶೀಘ್ರ ಚೇತರಿಕೆಗಾಗಿ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಗಳಾದ ಆಶಿತ್ ಪಿರೇರಾರವರ ನೇತೃತ್ವದಲ್ಲಿ ಚರ್ಚ್ , ದರ್ಗಾ ಹಾಗೂ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಮಂಗಳೂರಿನ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕ್ಷೇತ್ರ, ಬಿಕರ್ನಕಟ್ಟೆಯ ಇನ್ಫಾಂಟ್ ಜೀಸಸ್ ಚರ್ಚ್ ಹಾಗೂ ಹಝರತ್ ಸಯಿದಾನಿ ಬೀಬಿ ದರ್ಗಾದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರುಗಳಾದ ಮಧುಕರ್ ಶೆಟ್ಟಿ, ಧನರಾಜ್ ಪೂಜಾರಿ, ಬೇಬಿರಾಜ್ ಗರೋಡಿ, ವಿಕ್ರಮಾಚಾರ್ಯ, ವಿಘ್ನೇಷ್ ಆಚಾರ್ಯ, ಮನ್ವಿತ್ ಕರ್ಕೇರ, ಬೃಜೇಶ್, ಮಿಲಾಜ್ ಅತ್ತಾವರ, ವೆಲ್ವಿನ್ ಕ್ಯಾಸ್ಟಲಿನೋ, ಒಝ್ವಾಲ್ಡ್, ಡಿಲನ್ ಪಿರೇರಾ, ರೋಶನ್ ಮೋಂತೆರೊ, ಜೋವಿಯನ್ ಲೋಬೋ, ಮಿಸ್ಬಾಹ್ ಶೇಖ್ ಮುಂತಾದವರು ಪ್ರಾರ್ಥನೆ ಸಲ್ಲಿಸಿದರು.
ಆಸ್ಕರ್ ಫರ್ನಾಂಡಿಸ್ ಕೆಲವು ಸಮಯದಿಂದ ಮೂತ್ರ ಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ನಡೆಯುತ್ತಿದೆ. ಸೋಮವಾರ ಮಂಗಳೂರಿನ ತಮ್ಮ ಮನೆಯಲ್ಲಿ ಯೋಗ ಮಾಡುತ್ತಿರುವಾಗ ಬಿದ್ದಿದ್ದರು. ಅದೇ ದಿನ ಸಂಜೆ ಡಯಾಲಿಸಿಸ್ ಬಳಿಕ ಸ್ಕ್ಯಾನಿಂಗ್ ಮಾಡಿದಾಗ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡು ಬಂದಿದೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಿದ್ದು, ಸದ್ಯ ಅರೆಪ್ರಜ್ಞಾ ಸ್ಥಿತಿಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.