ಮಂಗಳೂರು, ಜು 21 (DaijiworldNews/PY): ನಕಲಿ ಪಾಸ್ಪೋರ್ಟ್ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಮುರಳೀಧರ ಪೈ.ಬಿ ಅವರು ಶಿಕ್ಷೆ ವಿಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಶಿಕ್ಷೆಗೊಳಗಾದ ಆರೋಪಿಯನ್ನು ಕಾಸರಗೋಡು ಜಿಲ್ಲೆ ಕಾಞಂಗಾಡ್ ನಿವಾಸಿ ಅಬ್ದುಲ್ ಬಶೀರ್ (45) ಎಂದು ಗುರುತಿಸಲಾಗಿದೆ.
2010ರ ಆಗಸ್ಟ್ 17ರಂದು ಅಬ್ದುಲ್ ಬಶೀರ್ ಬೇರೊಬ್ಬರ ಪಾಸ್ಪೋರ್ಟ್ಗೆ ತನ್ನ ಭಾವಚಿತ್ರವನ್ನು ಲಗತ್ತಿಸಿ ಮಂಗಳೂರು ವಿಮಾನ ನಿಲ್ದಾಣದ ಮೂಲಕ ದುಬೈಗೆ ತೆರಳಿದ್ದರು. ದುಬೈನಲ್ಲಿ ಇಮಿಗ್ರೇಷನ್ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಅಬ್ದುಲ್ ಬಶೀರ್ ಸಿಕ್ಕಿಬಿದ್ದಿದ್ದು, ಬಳಿಕ ಆತನನ್ನು ಮಂಗಳೂರಿಗೆ ವಾಪಾಸ್ಸು ಕಳುಹಿಸಲಾಗಿತ್ತು. ಇಲ್ಲಿ ಆತನ ವಿರುದ್ದ ಪಾಸ್ಪೋಟ್ ಕಾಯ್ದೆಯ ಕಲಂ ಅಡಿ ಪ್ರಕರಣ ದಾಖಲಾಗಿತ್ತು.
ಅಬ್ದುಲ್ ಬಶೀರ್ ವಿಚಾರಣೆಗೆ ಹಾಜರಾಗಿದ್ದ. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಈ ಹಿನ್ನೆಲೆ ಪ್ರಕರಣವನ್ನು ವಿಭಜಿಸಿ ಅಬ್ದುಲ್ ಬಶೀರ್ ಅನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಇನ್ನು ಪ್ರಕರಣಕ್ಕೆ ಸಹಕರಿಸಿದ ಮುನೀರ್ ಕೆ., ಉಕ್ಕಾಸ್ ಹಾಗೂ ಮುಹಮ್ಮದ್ ಕುಂಞಿ ಎಂಬವರ ವಿರುದ್ದ ಸಹ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ.
ಒಂದನೇ ಹೆಚ್ಚುವರಿ ಹಿರಿಯ ನ್ಯಾಯಿಕ ದಂಡಾಧಿಕಾರಿ ವಿಚಾರಣೆ ನಡೆಸಿದ್ದು, 019ರ ಫೆಬ್ರವರಿ 19ರಂದು ಅಬ್ದುಲ್ ಬಶೀರ್ ಬಿಡುಗಡೆಗೆ ಆದೇಶ ನೀಡಿದ್ದರು. ಈ ಆದೇಶವನ್ನು ಪ್ರಶ್ನಿಸಿ ಸರ್ಕಾರದ ಪರವಾಗಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮುರಲೀಧರ ಪೈ ಬಿ. ಅವರು ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದ್ದು, ಆರೋಪಿಗೆ ನಾಲ್ಕು ಅಪರಾಧಿಗಳಿಗೆ ತಲಾ 1 ವರ್ಷ ಶಿಕ್ಷೆ ಹಾಗೂ 1,000 ರೂ. ದಂಡ ವಿಧಿಸಿದ್ದಾರೆ.
ಸರಕಾರಿ ಅಭಿಯೋಜಕ ರಾಜು ಪೂಜಾರಿ ಬನ್ನಾಡಿ ಅವರು ಸರ್ಕಾರದ ಪರ ವಾದಿಸಿದ್ದಾರೆ.