ಬಂಟ್ವಾಳ, ಜು. 20 (DaijiworldNews/SM): ಬಿ.ಸಿ.ರೋಡು- ಪುಂಜಾಲಕಟ್ಟೆ ಹೆದ್ದಾರಿ ಅಭಿವೃದ್ಧಿಗಾಗಿ ನಮ್ಮ ಭೂಮಿ ಪಡೆದು ಪರಿಹಾರ ನೀಡಿಲ್ಲವೆಂದು ಆರೋಪಿಸಿ ಸಂತ್ರಸ್ತರು ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದ ತಮ್ಮ ಭೂಮಿಗೆ ಬೇಲಿ ಹಾಕಿ ಪ್ರತಿಭಟನೆ ನಡೆಸಿದ ಘಟನೆ ನಾವೂರು ಗ್ರಾಮದ ಹಳೆಗೇಟು ಎಂಬಲ್ಲಿ ನಡೆದಿದೆ.
ಹೆದ್ದಾರಿ ಅಭಿವೃದ್ಧಿಗಾಗಿ ಭೂಮಿ ನೀಡಿದ್ದ ಗ್ರಾಮಸ್ಥರಿಗೆ ಇಲಾಖೆ ಯಾವುದೇ ಪರಿಹಾರ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರು ಬಂಟ್ವಾಳದ ನಾವೂರು ಗ್ರಾಮದ ಹಳೆಗೇಟಿನಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೃಷ್ಣ ಕುಮಾರ್ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದ್ದಾರೆ.ನಮಗೆ ಪರಿಹಾರ ಮೊತ್ತದ ಪತ್ರ ಮಾತ್ರ ಬಂದಿದ್ದು, ಇನ್ನೂ ಕೂಡ ಪರಿಹಾರ ಸಿಕ್ಕಿಲ್ಲ, ಒಂದು ತಿಂಗಳ ಒಳಗೆ ಸ್ಥಳಕ್ಕೆ ಭೂಸ್ವಾಧೀನ ಅಧಿಕಾರಿಗಳನ್ನು ಕರೆಸಿ ಪರಿಹಾರದ ವ್ಯವಸ್ಥೆ ಕಲ್ಪಿಸುವಂತೆ ಸಂತ್ರಸ್ತ ಕೃಷಿಕರು ಆಗ್ರಹಿಸಿದರು.
ಇದಕ್ಕೆ ಸಮ್ಮತಿಸಿದ ಅಧಿಕಾರಿಗಳು ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಬಳಿಕ ಪರಿಹಾರ ದ ಮೊತ್ತವನ್ನು ನೀಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂದೆಗೆದುಕೊಂಡರು. ಆ ಮೂಲಕ ಹೆದ್ದಾರಿಗೆ ಬೇಲಿ ಹಾಕಿ ನಡೆಸಿದ ಪ್ರತಿಭಟನೆಗೆ ತಾತ್ಕಾಲಿಕ ಬ್ರೇಕ್ ದೊರೆತಿದೆ.