ಬ್ರಹ್ಮಾವರ, ಜು 20 (DaijiworldNews/MS/HR): ಇಲ್ಲಿನ ಸಮೀಪ ಉಪ್ಪಿನಕೋಟೆಯ ಅಪಾರ್ಟ್ಮೆಂಟ್ ನಲ್ಲಿ ಜು.12ರಂದು ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ರೋಚಕ ತಿರುವು ಲಭಿಸಿದೆ. ಈಗಾಗಲೇ ಕೊಲೆ ಆರೋಪಿ ವಿಶಾಲಾ ಅವರ ಪತಿ ರಾಮಕೃಷ್ಣ ಗಾಣಿಗ ಅವರನ್ನು ಪೊಲೀಸರು ಬಂಧಿಸಿದ್ದು ಜು.20 ರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಲಯವೂ ರಾಮಕೃಷ್ಣ ಗಾಣಿಗ ಅವರನ್ನು ಅವರನ್ನು 4 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಒಟ್ಟಾರೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ದೊರಕಿದೆ.
ವಿಶಾಲಾ ಅವರ ಪತಿ ರಾಮಕೃಷ್ಣ ಗಾಣಿಗನೇ ದುಬೈನಲ್ಲಿದ್ದುಕೊಂಡು ಪತ್ನಿಯ ಕೊಲೆಗೆ ಸಂಚು ರೂಪಿಸಿ, ಅಂತರ್ ರಾಜ್ಯ ಬಾಡಿಗೆ ಹಂತಕರಿಗೆ ಸುಪಾರಿ ನೀಡಿರುವ ಸಾಧ್ಯತೆ ದಟ್ಟವಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಉತ್ತರ ಭಾರತ ಮೂಲದ ಸುಪಾರಿ ಕಿಲ್ಲರ್ ಓರ್ವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಜಿಲ್ಲಾ ಎಸ್.ಪಿ.ಯವರ ನೇತೃತ್ವದಲ್ಲಿ ರಚನೆಯಾದ ಆರು ತನಿಖಾ ತಂಡಗಳು ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆಳೆಯಲು ಸಾಕಷ್ಟು ಶ್ರಮಿಸಿದ್ದು, ಹೊರ ರಾಜ್ಯದಲ್ಲು ಅವಿತಿದ್ದ ಸುಪಾರಿ ಕಿಲ್ಲರ್ ನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದೆ. ಇನ್ನು ಈ ಕುರಿತು ಸಂಪೂರ್ಣ ಮಾಹಿತಿಯನ್ನು ಉಡುಪಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಜು.20 ರ ಬುಧವಾರ ಬೆಳಿಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುವ ನಿರೀಕ್ಷೆಯಿದೆ.
ಘಟನೆಯ ವಿವರ :
ಜುಲೈ 12ರಂದು ಬ್ರಹ್ಮಾವರದ ಅಪಾರ್ಟ್ಮೆಂಟ್ ಒಂದರಲ್ಲಿ ಮಹಿಳೆಯ ಕುತ್ತಿಗೆಗೆ ವಯರ್ ಬಿಗಿದು ಹತ್ಯೆ ಮಾಡಲಾಗಿದ್ದು, ಕೊಲೆಯಾದ ಮಹಿಳೆ ಕೆಲವು ದಿನಗಳ ಹಿಂದೆಯಷ್ಟೆ ವಿದೇಶದಿಂದ ಆಗಮಿಸಿದ್ದರು. ಕೊಲೆಯಾದ ದಿನ ಸೋಮವಾರ ತನ್ನ ತಂದೆ ತಾಯಿ ಹಾಗೂ 6 ವರ್ಷದ ಮಗುವಿನೊಂದಿಗೆ ಆಟೋವೊಂದರಲ್ಲಿ ಗಂಗೊಳ್ಳಿ ಸಮೀಪದ ನಾಯಕವಾಡಿಯ ಮನೆಗೆ ತೆರಳಿದ್ದರು. ಅಲ್ಲಿ ತಂದೆ, ತಾಯಿ ಹಾಗೂ ಮಗುವನ್ನು ಬಿಟ್ಟು ಬ್ಯಾಂಕ್ಗೆ ಹೋಗಿ ಬರುತ್ತೇನೆಂದು ಅದೇ ಆಟೋದಲ್ಲಿ ಹಿಂದಕ್ಕೆ ಬಂದಿದ್ದರು. ಆದರೆ ಸಂಜೆಯಾದರೂ ಮನೆಗೆ ಬಾರದ ಕಾರಣ ಮಗಳನ್ನು ಹುಡುಕಿ ಬ್ರಹ್ಮಾವರಕ್ಕೆ ತಂದೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಫೋನ್ ಕಾಲ್ ಗಳು, ಫ್ಲಾಟ್ ವ್ಯಾಪ್ತಿಯೊಳಗಿನ ನೆಟ್ವರ್ಕ್, ಸ್ಥಳೀಯ ಪ್ರದೇಶದ ಸಿಸಿಟಿವಿ ಫೂಟೇಜ್, ಹೀಗೆ ಎಲ್ಲವನ್ನು ಸಂಗ್ರಹಿಸಲಾಗುತ್ತಿದ್ದು, ಪರಿಚಿತರಿಂದಲೇ ಕೊಲೆ ನಡೆದಿರಬಹುದು ಎನ್ನುವ ಅನುಮಾನಕ್ಕೆ 2 ಟೀ ಕುಡಿದ ಕಪ್ ಗಳು ಮಾತ್ರ ಸಾಕ್ಷಿಯಾಗಿದ್ದು, ಈ ಪ್ರಕರಣವನ್ನು ಭೇಧಿಸಲು ಬ್ರಹ್ಮಾವರ ಪೋಲೀಸ್ ಠಾಣೆ ಸೇರಿದಂತೆ ಒಟ್ಟು ನಾಲ್ಕು ವಿಶೇಷ ತಂಡಗಳನ್ನು ರಚಿಸಿ ಕಾರ್ಯಚರಣೆ ನಡೆಸಿ ವಿಶಾಲಾ ಅವರ ಪತಿ ರಾಮಕೃಷ್ಣ ಗಾಣಿಗನನ್ನು ವಶಕ್ಕೆ ಪಡೆದು ಇಂದು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಉತ್ತರ ಭಾರತ ಮೂಲದ ಸುಪಾರಿ ಕಿಲ್ಲರ್ ಓರ್ವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಒಟ್ಟಾರೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ದೊರಕಿದೆ ಎನ್ನಲಾಗಿದೆ.