ಕೋಟ, ಜು 20 (DaijiworldNews/MS): ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉತ್ತಮ ಒಬ್ಬ ಅತ್ಯುತ್ತಮ ಆಡಳಿತ ಕೊಡೋ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಿದ್ದಾರೆ. ಪಾರ್ಟಿಯ ಸಂಘಟನೆ ಇದೆ. ಎಲ್ಲಾ ಶಾಸಕರು, ಎಂಪಿ, ಮಂತ್ರಿಗಳೆಲ್ಲಾ ನಮ್ಮ ನಮ್ಮ ಕೆಲಸಗಳನ್ನು ನಿಷ್ಠೆಯಿಂದ ಮಾಡುತ್ತಿದ್ದೇವೆ. ಇನ್ನು ನಾಯಕತ್ವದ ವಿಚಾರವಾಗಿ ಚರ್ಚೆಗಳು ಬಂದಾಗ ಹೈಕಮಾಂಡ್ ಅದರ ಬಗ್ಗೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ಅವರು ಜು.20ರ ಮಂಗಳವಾರ ಕೋಟ-ಪಡುಕರೆಯಲ್ಲಿ ಮೀನುಗಾರಿಕೆ ಇಲಾಖೆಯ ಅನುದಾನದಲ್ಲಿ ಅಭಿವೃದ್ಧಿಗೊಳಿಸಲಾದ ರಸ್ತೆಯ ವೀಕ್ಷಣೆಗೆ ಆಗಮಿಸಿದ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದರು.
ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಮಾನ್ಯ ಮುಖ್ಯಮಂತ್ರಿಗಳು ಮುಖ್ಯಮಂತ್ರಿಗಳಾಗಿ ತಮ್ಮ ಅನುಭವದ ವಿಚಾರಧಾರೆಯ ಮೇರೆಗೆ ಅತ್ಯುತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ.ಮುಖ್ಯಮಂತ್ರಿಗಳ ಕಾರ್ಯನಿರ್ವಹಣೆ ಬಗ್ಗೆ ಪಕ್ಷದಲ್ಲಿ ಯಾವುದೇ ಅಪಸ್ವರವಿಲ್ಲ, ಗೊಂದಲಗಳಿಲ್ಲ. ಮುಖ್ಯಮಂತ್ರಿಗಳು ತನ್ನ ಜವಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಈ ಗೊಂದಲಗಳೆಲ್ಲ ಮಾಧ್ಯಮಗಳ ಸೃಷ್ಟಿ ಎಂದು ಹೇಳಿದರು.
ಉಸ್ತುವಾರಿ ಮಂತ್ರಿಗಳಿಗೆ ತಮ್ಮ ತಮ್ಮ ಜಿಲ್ಲೆ ಹಾಗೂ ಅವರವರ ಕ್ಷೇತ್ರದ ಬಗ್ಗೆ ಗಮನ ಕೊಡಲು ಹೇಳಿದ್ದಾರೆ. ಕೋವಿಡ್ ನಿಯಂತ್ರಣವೂ ಸೇರಿದಂತೆ ಅಭಿವೃದ್ಧಿಗಳ ಬಗೆಗೆ ಹೆಚ್ಚು ಗಮನ ಕೊಡುವ ಅವಶ್ಯಕತೆ ಇದೆ. ನಾವು ನಮ್ಮ ನಮ್ಮ ಕೆಲಸಗಳನ್ನು ಮಾಡುತ್ತಿದ್ದೇವೆ. ಪಾರ್ಟಿಯಲ್ಲಿ ಏನಾದರೂ ನಾಯಕ, ನಾಯಕತ್ವದ ಚರ್ಚೆಗಳು ಬಂದಾಗ ನಳಿನ್ ಕುಮಾರ್ ಅವರು ಹಾಗೂ ರಾಷ್ಟ್ರೀಯ ಅಧ್ಯಕ್ಷರು, ಹೈಕಮಾಂಡ್ ಅದರ ಬಗ್ಗೆ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.