ಪಡುಬಿದ್ರಿ, ಜು 20 (DaijiworldNews/MS): ಯುವಕನೋರ್ವ ನೇಣಿಗೆ ಶರಣಾಗಿರುವ ಘಟನೆ ಕಾರ್ಕಳ ತಾಲೂಕು ಇನ್ನಾ ಗ್ರಾಮದ ಸಂದೋಳಿಗೆಯಲ್ಲಿ ನಡೆದಿದೆ. ಮೃತರನ್ನು ಇನ್ನಾ ಗ್ರಾಮದ ದಿ. ಕುಪ್ಪ ಶೆಟ್ಟಿ ಅವರ ಪುತ್ರ ರೋಶನ್ ಶೆಟ್ಟಿ (23) ಎಂದು ಗುರುತಿಸಲಾಗಿದೆ.
ರೋಶನ್ ಶೆಟ್ಟಿ ಯಾವುದೇ ಕೆಲಸವಿಲ್ಲದೇ ಇದ್ದು, ಹೊರಗಡೆ ದುಡಿಯಲೂ ಸಹ ಹೋಗುತ್ತಿರಲಿಲ್ಲ. ಊರಿನ ಕೆಲವರಲ್ಲಿ ಕೈಸಾಲ ಮಾಡಿಕೊಂಡಿದ್ದು, ಅದನ್ನು ಹಿಂತಿರುಗಿಸಲು ಆಗದೇ, ಅದೇ ಚಿಂತೆಯಲ್ಲಿ ಜೀವನಲ್ಲಿ ಜಿಗುಪ್ಸೆಗೊಂಡಿದ್ದು, ಜು.೧೯ ರ ಸಂಜೆ ಸಂದೋಳಿಗೆ ಹಾಡಿಯಲ್ಲಿನ ಗೇರು ಮರದ ರೆಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ದೊಡ್ಡಪ್ಪ ವಿಶ್ವನಾಥ ಕೆ ಶೆಟ್ಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 17/2021, ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821