ಪಡುಬಿದ್ರೆ, ಜು 20 (DaijiworldNews/MS): ತೆಂಕ ಎರ್ಮಾಳು ಗರೋಡಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನವಿಲೊಂದಕ್ಕೆ ಡಿಕ್ಕಿಯಾಗಿ ನಿಯಂತ್ರಣ ಕಳೆದುಕೊಂಡ ಸ್ಕೂಟರ್ ಸವಾರ ರಸ್ತೆಯಂಚಿನ ಕಲ್ಲೊಂದಕ್ಕೆ ಡಿಕ್ಕಿಯಾಗಿ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಮೃತ ಯುವಕ ಬೆಳಪು ನಿವಾಸಿ ಪಡುಬಿದ್ರಿ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಅಬ್ದುಲ್ (25) ಎಂದು ಗುರುತಿಸಲಾಗಿದೆ.
ಪಡುಬಿದ್ರಿ ಕಡೆಯಿಂದ ತನ್ನ ಸ್ಕೂಟರಲ್ಲಿ ಬರುತ್ತಿದ್ದ ಯುವಕನಿಗೆ ನವಿಲೊಂದು ಹಾರಿಕೊಂಡು ಬಂದು ಡಿಕ್ಕಿಯಾಗಿದೆ. ಅಪಘಾತದಲ್ಲಿ ನವಿಲು ಸ್ಥಳದಲ್ಲೇ ಮೃತಪಟ್ಟರೆ, ಗಾಯಾಳು ಅಬ್ದುಲ್ ಜೀವನ್ಮರಣ ಹೋರಾಟದಲ್ಲಿದ್ದು ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಆಂಬುಲೆನ್ಸ್ಗೆ ಕರೆ ಮಾಡಿ ಆಂಬುಲೆನ್ಸ್ ಬಾರದಿದ್ದರಿಂದ, ಸ್ಥಳೀಯ ಕಾರ್ತಿಕ್ ಎಂಬ ಯುವಕ ತನ್ನ ಖಾಸಗಿ ವಾಹನದಲ್ಲಿ ಸಾಗಿಸಿದ್ದರಾದರೂ ಅಷ್ಟರಲ್ಲೇ ಆ ಯುವಕ ಮೃತ ಪಟ್ಟಿದ್ದಾರೆ.
ಪಡುಬಿದ್ರಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಸಂಬಂಧ ಪ್ರಕರಣವನ್ನು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ತಾಲೂಕಿನಲ್ಲಿ ನವಿಲುಗಳ ಅಪಾಯ ಹೆಚ್ಚುತ್ತಿದೆ. ಭತ್ತದ ಗದ್ದೆಗಳಲ್ಲಿ ಬೆಳೆ ನಾಶಪಡಿಸುತ್ತಿದ್ದಾರೆ. ಪಕ್ಷಿಗಳು ಸಹ ಹೆದ್ದಾರಿಯಲ್ಲೂ ಸಂಚರಿಸುತ್ತಿದ್ದು ಸವಾರರಿಗೆ ಆತಂಕ ತಂದೊಡ್ಡುತ್ತಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಜನರ ಪ್ರತಿನಿಧಿ ಜಹೀರ್ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.