ಉಡುಪಿ, ಜು.19 (DaijiworldNews/HR): ಬ್ರಹ್ಮಾವರ ಸಮೀಪದ ಉಪ್ಪಿನಕೋಟಿಯ ಬಳಿ ಇರುವ ಮಿಲನ ರೆಸಿಡೆನ್ಸಿಯಲ್ಲಿ ಸಂಭವಿಸಿದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶಾಲ ಗಾಣಿಗ ಅವರ ಪತಿ ರಾಮಕೃಷ್ಣ ಗಾಣಿಗ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಲವು ದಿನಗಳ ಹಿಂದೆ ವಿದೇಶದಿಂದ ಆಗಮಿಸಿದ ನಂತರ ಪ್ರತಿದಿನ ಪೊಲೀಸ್ ಠಾಣೆಗೆ ಹಾಜರಾಗುವಂತೆ ರಾಮಕೃಷ್ಣ ಅವರಿಗೆ ಪೊಲೀಸರು ತಿಳಿಸಿದ್ದರು. ಆದರೆ ಆತ ಪೊಲೀಸ್ ತನಿಖೆ ಪ್ರಕ್ರಿಯೆಗೆ ಸರಿಯಾಗಿ ಆಗಮಿಸುತ್ತಿರದ ಕಾರಣ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಹಂತಕರ ಪತ್ತೆಗಾಗಿ ಈಗಾಗಲೇ 6 ಪೊಲೀಸ್ ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚಿನ ತಂಡಗಳು ರಾಜ್ಯದ ಹೊರಗೆ ಬೀಡುಬಿಟ್ಟಿವೆ ಮತ್ತು ಘಟನೆಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು ರಾಜ್ಯದ ಹೊರಗಿನ ಸುಪಾರಿ ಹಂತಕರನ್ನು ಈ ಕೊಲೆಗೆ ಬಳಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ರಾಮಕೃಷ್ಣ ಗಾಣಿಗ ಬಂಧನದ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಒಂದೆರಡು ದಿನಗಳಲ್ಲಿ ರಹಸ್ಯವನ್ನು ಬಗೆಹರಿಸಲು ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ.