ಉಡುಪಿ, ಜು.19 (DaijiworldNews/HR): ತುಳು ಮತ್ತು ಕನ್ನಡ ನಮ್ಮದೇ ಭಾಷೆ, ಎರಡನ್ನು ಉಳಿಸಿ ಬೆಳೆಸಬೇಕು. ಸರಕಾರ ತುಳು ಭಾಷೆಗೆ ಮಾನ್ಯತೆ ಕೊಟ್ಟು, ತುಳು ಭಾಷೆಯನ್ನು ಶಾಲೆಯಲ್ಲಿ ಕಲಿಸಲು ಸರಕಾರ ಒತ್ತು ಕೊಡಲಿ. ವಿಧಾನ ಸಭಾ ಅಧಿವೇಶನದಲ್ಲಿ ಕರಾವಳಿ ಭಾಗದ ಶಾಸಕರಿಗೆ ತುಳುವಿನಲ್ಲೇ ಮಾತನಾಡಲು ಅವಕಾಶ ಕಲ್ಪಿಸಲು ಮನವಿ ಮಾಡಲಾಗಿತ್ತು. ಆದರೆ ಸದನದಲ್ಲಿ ದಾಖಲಾಗುವ ಮಾಹಿತಿಗಳನ್ನು ದಾಖಲು ಮಾಡುವವರಿಗೆ ತುಳು ಭಾಷೆಯ ಅರಿವಿನ ಕೊರತೆಯಿರುವುದರಿಂದ ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ಸಭಾಧ್ಯಕ್ಷರು ನೀಡಿರುತ್ತಾರೆ. ತುಳುವನ್ನು 8ನೇ ಪರಿಚ್ಛೇದ ಕ್ಕೆ ಸೇರಿಸಲು ಸರಕಾರ ಅವಕಾಶ ಕೊಡಬೇಕು. ಎಲ್ಲರಿಗೂ ಅಭಿಪ್ರಾಯ ವ್ಯಕ್ತ ಪಡಿಸಲು ಅವಕಾಶ ಇದೆ. ನಾನು ಯಾವ ಭಾಷಾ ವಿರೋಧಿಯು ಅಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಆಯೋಜಿಸಲಾದ "ತುಳು ಲಿಪಿ ಮಂದಾರ" ಬಿಡುಗಡೆ ಕಾರ್ಯಕ್ರಮದಲ್ಲಿ "ತುಳು ಲಿಪಿ ಮಂದಾರ" ವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, "ತಾಳೆಗರಿ ಉಪಯೋಗಿಸುತ್ತಿದ್ದ ಕಾಲಘಟ್ಟದಲ್ಲಿ ತುಳು ಲಿಪಿ ಬಳಕೆಯಾಗುತ್ತಿತ್ತು. ಪುರಾತನವಾದ ಐತಿಹಾಸಿಕ ಹಿನ್ನೆಲೆಯಿರುವ ತುಳು ಭಾಷೆ, ತುಳು ಲಿಪಿ ಮಧ್ವಾಚಾರ್ಯರ ಕಾಲಘಟ್ಟದಲ್ಲಿಯೂ ಬಳಕೆ ಮಾಡುತ್ತಿದ್ದರು ಎಂಬುದಕ್ಕೆ ಅಷ್ಠಮಠಗಳಲ್ಲಿ ಪುರಾವೆಗಳಿವೆ. ನಶಿಸಿ ಹೋಗುತ್ತಿರುವ ತುಳು ಲಿಪಿಗೆ ಮತ್ತೆ ಪುನಶ್ಚೇತನ ತುಂಬುವ ಕೆಲಸ ಆಗಬೇಕಿದೆ" ಎಂದರು.
"ಪ್ರಾಂತ್ಯಗಳು ಬದಲಾದಂತೆ ಆಡಳಿತ ವ್ಯವಸ್ಥೆಗಳಿಂದಾಗಿ ತುಳು ಲಿಪಿ ಜನಮಾನಸದಿಂದ ದೂರವಾಗಿದೆ. ಪ್ರಸಕ್ತ ದಿನಗಳಲ್ಲಿ ತುಳು ಭಾಷೆ ತುಳು ಲಿಪಿಯ ಬಗ್ಗೆ ಯುವ ಸಮುದಾಯ ಮಾಡುತ್ತಿರುವ ಕೆಲಸ ಶ್ಲಾಘನೀಯವಾಗಿದೆ. ಎಂದು ಹೇಳಿದ ಅವರು ತುಳು ಲಿಪಿ, ಭಾಷೆ ಬಗ್ಗೆ ಜೈ ತುಳುನಾಡು ಸಂಘಟನೆಯ ಈ ಪ್ರಯತ್ನ ಉತ್ತಮ ಬೆಳವಣಿಗೆ. ಜನಮಾನಸದಲ್ಲಿ ತುಳು ಲಿಪಿ ಮೂಡಿ ಬಂದು ಎಲ್ಲರೂ ಬಳಸಿಕೊಳ್ಳುವಂತಾಗಬೇಕು" ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ತುಳು ಅಕಾಡೆಮಿಯ ಸದಸ್ಯರಾದ ಡಾ.ಆಕಾಶ್ ರಾಜ್ ಜೈನ್, ತಾರಾ ಆಚಾರ್ಯ, ಜೈ ತುಳುನಾಡು ಸಂಘಟನೆಯ ಅಧ್ಯಕ್ಷರಾದ ಸುದರ್ಶನ್ ಸೂರತ್ಕಲ್, ಸದಸ್ಯ, ತುಳು ಅಕ್ಷರ ವಿನ್ಯಾಸಕಾರ ಪ್ರಹ್ಲಾದ್ ಪಿ. ತಂತ್ರಿ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.