ಮಂಗಳೂರು, ಜು.19 (DaijiworldNews/HR): ವಿಧಾನಸಭಾ ಕ್ಷೇತ್ರದ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ(ಎನ್ಎಸ್ಯುಐ) ಅಧ್ಯಕ್ಷರಾಗಿ ಅಹ್ನಾಫ್ ಅಹ್ಮದ್ ನೇಮಕವಾಗಿದ್ದಾರೆ.
ಇವರು ದಕ್ಷಿಣ ಕನ್ನಡ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿದ್ದು ಮಂಗಳೂರಿನ ಎಸ್ಡಿಎಮ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದಾರೆ.
ಪ್ರೌಢಶಾಲೆಯಿಂದಲೇ ತನ್ನ ಸಹಪಾಠಿಗಳೊಂದಿಗೆ ತಂಡವನ್ನು ಕಟ್ಟಿ ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಇವರು ಯಾವುದೇ ಸಮಯದಲ್ಲೂ ಬಡವರ ಬಗ್ಗೆ ಅತೀವ ಕಾಳಜಿ ಹೊಂದಿದವರಾಗಿದ್ದಾರೆ. ಅತ್ಯಂತ ಮೃದು ಸ್ವಭಾವದ ಇವರು ಉತ್ತಮ ಕ್ರಿಕೆಟ್ ಹಾಗೂ ಫುಟ್ಬಾಲ್ ಆಟಗಾರ ಕೂಡ ಹೌದು.
ಇನ್ನು ಅಹ್ನಾಫ್ ಅಹ್ಮದ್ ಅವರು ಪ್ರಸ್ತುತ ಬಿ-ಹ್ಯುಮನ್ ಸಮಾಜಸೇವಾ ಸಂಸ್ಥೆಯ ಸಕ್ರಿಯ ಕಾರ್ಯಕರ್ತರಾಗಿದ್ದು ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಅತಂತ್ರರಾದವರಿಗೆ ಉಚಿತ ಊಟದ ವ್ಯವಸ್ಥೆ, ಉಚಿತ ರೇಷನ್ ಕಿಟ್ ವಿತರಣೆ, ವೆನ್ಲಾಕ್ ಆಸ್ಪತ್ರೆಯ ರೋಗಿಗಳಿಗೆ ಉಚಿತ ಹಣ್ಣು-ಹಂಪಲು ವಿತರಣೆ, ಧಾರ್ಮಿಕ ಸ್ಥಳಗಳ ಸ್ಯಾನಿಟೈಸೇಶನ್, ಕೊರೊನಾದಿಂದ ಬಳಲುವ ರೋಗಿಗಳಿಗೆ ಆಕ್ಸಿಜನ್ ವ್ಯವಸ್ಥೆ ಮುಂತಾದ ಸಾಮಾಜಿಕ ಸೇವೆಗಳ ಮೂಲಕ ಜನ-ಮನವನ್ನು ಗೆದ್ದಿದ್ದರು.
ಮಂಗಳೂರು ವಿಧಾನಸಬಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಯು.ಟಿ ಖಾದರ್ ರವರ ಶಿಫಾರಸ್ಸಿನ ಮೇರೆಗೆ ರಾಜ್ಯ ಎನ್ಎಸ್ಯುಐ ಪದಾಧಿಕಾರಿಗಳು ಇವರನ್ನು ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ.