ಬ್ರಹ್ಮಾವರ, ಜು 19 (DaijiworldNews/MS): ಬ್ರಹ್ಮಾವರ ಸಮೀಪದ ಉಪ್ಪಿನಕೋಟಿಯ ಬಳಿ ಇರುವ ಮಿಲನ ರೆಸಿಡೆನ್ಸಿಯಲ್ಲಿ ಸಂಭವಿಸಿದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ನಡೆದು (ಜು.19) ಇಂದಿಗೆ ಒಂದು ವಾರ ಕಳೆದಿದೆ.
ಆದರೂ ಕೊಲೆಗಾರರು ಇನ್ನು ಪತ್ತೆಯಾಗಿಲ್ಲ.ಪೋಲಿಸ್ ಇಲಾಖೆ ಮಾತ್ರ ಇನ್ನು ತನಿಖೆ ಪ್ರಗತಿಯಲ್ಲಿದೆ ಎಂಬ ಉತ್ತರ ನೀಡಿ ಸುಮ್ಮನಾಗುತ್ತಿದ್ದಾರೆ. ಹಂತಕರ ಪತ್ತೆಗಾಗಿ ಈಗಾಗಲೇ 4 ತನಿಖಾ ತಂಡ ರಚನೆಯಾಗಿದ್ದರೂ ಪೋಲಿಸ್ ಇಲಾಖೆ ಇಷ್ಟೊಂದು ತಡವಾಗಿ ಪ್ರಕರಣವನ್ನು ಬೇಧಿಸಲು ವಿಳಂಬವಾಗುತ್ತಿರುವುದು ಯಾಕೆ? ಕೊಲೆ ಪ್ರಕರಣಕ್ಕೆ ಏನಾದ್ರೂ ಕೊಲೆ ಹೊರತು ಪಡಿಸಿದ ರೋಚಕ ತಿರುವು ಸಿಗಬಹುದೇ? ಎಂಬ ಪ್ರಶ್ನೆ ಉದ್ಬವಿಸಿದೆ.
ಎಸ್ಪಿ ವಿಷ್ಣುವರ್ಧನ್ರವರ ನೇತೃತ್ವದಲ್ಲಿ ಮೊದಲು ನಾಲ್ಕು ತನಿಖಾ ತಂಡ ರಚನೆ ಮಾಡಲಾಗಿತ್ತು. ಪ್ರಕರಣದ ತೀವ್ರತೆಯನುಸಾರ ಇದೀಗ ಆರೇಳು ವಿಶೇಷ ಪೋಲಿಸ್ ತಂಡ ಕೆಲಸ ಮಾಡುತ್ತಿವೆ, ಕೇವಲ ಉಡುಪಿ ಅಲ್ಲದೆ ಪಕ್ಕದ ದಕ್ಷಿಣ ಕನ್ನಡ, ನೆರೆ ರಾಜ್ಯವಾದ ಕೇರಳ, ಇತರ ರಾಜ್ಯದಲಿ ಪೋಲಿಸರ ತಂಡ ಹದ್ದಿನ ಕಣ್ಣಿಟ್ಟಿದೆ. ಹೊರರಾಜ್ಯದಲ್ಲಿದ್ದ ಇಬ್ಬರು ಸುಪಾರಿ ಕಿಲ್ಲರ್ ಗಳನ್ನು ವಶಕ್ಕೆ ಪಡೆದು ಪೋಲಿಸರು ಉಡುಪಿಗೆ ಕರೆತರಲಾಗುತ್ತಿದೆ ಎಂಬ ಮಾಹಿತಿ ಮೂಲಗಳ ಪ್ರಕಾರ ಲಭ್ಯವಾಗುತ್ತಿದೆ.
ಈಗಾಗಲೇ ಕೊಲೆ ಪ್ರಕರಣದಲ್ಲಿ ಬೇರೆ ಬೇರೆ ದಿಕ್ಕಿನಲ್ಲಿ ಸಾಗುತ್ತಿದೆ. ಮೊದಲನೆಯದಾಗಿ ಪ್ರಕರಣಕ್ಕೆ ಸುಳಿವು ಸಿಕ್ಕ ಪ್ಲಾಟ್ನಲ್ಲಿದ್ದ ಟೀ ಕಪ್ಗಳು. ಒಂದು ಮೂಲಗಳ ಪ್ರಕಾರ ಅವರ ಆತ್ಮೀಯರೇ ಪ್ಲಾಟಿಗೆ ಬಂದಿರಬಹುದು. ಅಪರಿಚಿತರಾದವರನ್ನು ಮನೆಯೊಳಗೆ ಬಿಟ್ಟು ಕೊಡದ ಆಕೆ ಕೊಲೆಯಾದದ್ದು ಹೇಗೆ? ಎಂಬ ಅನುಮಾನ ಹುಟ್ಟುಹಾಕಿತ್ತು. ಪ್ಲ್ಯಾಟ್ ನಲ್ಲಿ ಎರಡು ಟೀ ಕಪ್ ಗಳು ಸಿಕ್ಕಿರುವ ಕಾರಣ ರೂಮಿಗೆ ಬಂದವರು ಇಬ್ಬರಾಗಿರಲೂಬಹುದು ಎಂದು ಶಂಕಿಸಲಾಗಿತ್ತು. ಇನ್ನು ವಿಶಾಲಾ ಅವರ ಬಳಿಯಲ್ಲಿದ್ದ ಎಲ್ಲಾ ಚಿನ್ನವನ್ನು ದೋಚದೆ, ಕೇವಲ ತನಿಖೆಯ ದಿಕ್ಕು ತಪ್ಪಿಸುವುದಕ್ಕಾಗಿ ಚಿನ್ನ ಕಳವು ಮಾಡಲಾಗಿತ್ತೇ? ಬ್ಯಾಂಕ್ ವ್ಯವಹಾರ ಮುಗಿಸಿ ತನ್ನ ಗಂಡನ ಮನೆ ಗುಜ್ಜಾಡಿಗೆ ಹೋಗಬೇಕಿದ್ದ ವಿಶಾಲ ಮತ್ತೆ ಉಪ್ಪಿನಕೋಟೆಯ ಪ್ಲಾಟಿಗೆ ಬಂದಿದ್ದು ಯಾಕೆ? ಅಂತಹ ತುರ್ತು ಏನಿತ್ತು? ಪ್ಲಾಟ್ ನಲ್ಲಿ ಸಿಸಿಟಿವಿ ವ್ಯವಸ್ಥೆ ಇಲ್ಲ ಎನ್ನುವುದು ಖಚಿತ ಪಡಿಸಿಕೊಂಡೇ ಕೊಲೆಗಾರರೂ ಬಂದಿರಬಹುದೇ? ಎನ್ನುವ ಪ್ರಶ್ನೆ ಕಾಡತೊಡಗುತ್ತದೆ
ಕೊಲೆಯ ಪ್ರಕರಣದ ನಂತರ ಮೊದಲು ವಿಚಾರಿಸಿದ್ದೇ ಪರಿಚಯಸ್ಥ ಆಟೋ ಚಾಲಕ. ಆದರೆ ಸಿಸಿಟಿವಿಯಲ್ಲಿ ಆತನ ಚಟುವಟಿಕೆಯನ್ನು ಗಮನಿಸಿದರೆ ಈ ಕೊಲೆಗೂ ಆತನಿಗೂ ಸಂಬಂಧವಿಲ್ಲ ಎಂದು ಮೇಲ್ನೋಟಕ್ಕೆ ಪೋಲಿಸರಿಗೆ ಕಂಡು ಬಂದಿದೆ. ಆದರೂ ಸಾಕ್ಷಿ ತಳ್ಳಿ ಹಾಕುವಂತಿಲ್ಲ.
ಸುಪಾರಿ ಹಂತಕರಿಂದ ಕೊಲೆಯಾದರೆ?
ಆಸ್ತಿ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ವಿಶಾಲ ಗಾಣಿಗನ ಪತಿ ರಾಮಕೃಷ್ಣ ಗಾಣಿಗರು ಹೊರದೇಶದಿಂದ ಇಲ್ಲಿಗೆ ಆಕೆಯ ಅಂತ್ಯ ಸಂಸ್ಕಾರಕ್ಕೆ ಬಂದು ಪಾಲ್ಗೊಂಡಿದ್ದು ಸದ್ಯ ಎಲ್ಲ ವಿಚಾರಣೆಯ ನಂತರ ಗಂಡನೇ ಪ್ರಮುಖ ಸಾಕ್ಷಿಯಾಗಿದ್ದಾರೆ. ಇನ್ನೊಂದೆಡೆ ಖುದ್ದು ಎಸ್ಪಿಯವರೇ ಗಾಣಿಗರ ವಿಚಾರಣೆ ಮಾಡುತ್ತಿದ್ದಾರೆ. ಸರಿಯಾದ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ತೀವ್ರ ವಿಚಾರಣೆಯನ್ನು ನಡೆಸಲಾಗುತ್ತಿದೆ. ಇದನ್ನು ಗಮನಿಸಿದರೆ ವಿಶಾಲ ಅವರ ಪತಿ ಕಡೆಗೆ ಸಂಶಯ ಸುಳಿದಾಡುತ್ತಿದೆ. ಇನ್ನೆರಡು ದಿನದಲ್ಲಿ ಈ ವಿಚಾರಣೆ ಕೊನೆಯ ಹಂತ ತಲುಪಬಹುದು ಎಂಬ ನಿರೀಕ್ಷೆ ಇದೆ.
ವಿಶಾಲ ಕೊಲೆ ಪ್ರಕರಣವನ್ನು ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ಮಾಡುತ್ತಿರುವ ಪೋಲಿಸರಿಗೆ ಹೊಸ ವಿಷಯಗಳು ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ ಸರಿಯಾದ ಸಾಕ್ಷ್ಯಗಳನ್ನು ಸಂಗ್ರಹ ಮಾಡುವುದಕ್ಕೋಸ್ಕರನೇ ಪೋಲೀಸ್ ಇಲಾಖೆ ಪ್ರಕರಣವನ್ನು ತಾರ್ಕಿಕ ಹಂತಕ್ಕೆ ತರಲು ವಿಳಂಬ ಮಾಡುತ್ತಿದ್ದಾರಾ? ಇನ್ನೆರಡು ದಿನದಲ್ಲಿ ವಿಶಾಲ ಗಾಣಿಗರ ಕೊಲೆಯ ಹಿಂದಿರುವ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ? ಅಥವಾ ಈ ಕೊಲೆ ಕೇವಲ ಆಸ್ತಿ-ಹಣದ ವ್ಯವಹಾರಕ್ಕೆ ಸೀಮಿತವಾಗದೆ ಮತ್ತೊಂದು ಊಹಾನಾತೀತ ಟ್ವಿಸ್ಟ್ ಪಡೆದುಕೊಳ್ಳುವ ಸಾಧ್ಯತೆಗಳಿವೆಯೇ ಎಂದು ಕಾದು ನೋಡಬೇಕು.