ಬೆಳ್ತಂಗಡಿ, ಜು 19 (DaijiworldNews/PY): ಸಾಧುವೇಷಧಾರಿಗಳು ಮನೆಗೆ ಭೇಟಿ ನೀಡಿದ ಸಂದರ್ಭ ಗ್ರಾ.ಪಂ. ಸದಸ್ಯರೋರ್ವರು ತಮಗರಿವಿಲ್ಲದೇ 81 ಸಾವಿರ ರೂ. ನೀಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಪಡಂಗಡಿ ಬಳಿ ನಡೆದಿದೆ.
ಸಾಂದರ್ಭಿಕ ಚಿತ್ರ
ಪಡಂಗಡಿ ಗ್ರಾ.ಪಂ. ಸದಸ್ಯರಾದ ಸಂತೋಷ್ ಕುಮಾರ್ ಜೈನ್ ಅವರು ಹಣ ಕಳೆದುಕೊಂಡ ವ್ಯಕ್ತಿ.
ಸಂತೋಷ್ ಕುಮಾರ್ ಜೈನ್ ಅವರು ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಸಾಧುವಿನ ವೇಷದಲ್ಲಿ ಬಂದ ನಾಲ್ವರು ಮನೆಯೊಳಗೆ ಬರಬಹುದೇ ಎಂದು ಕೇಳಿದ್ದಾರೆ. ಮನೆಯೊಳಗೆ ಬಂದ ಸಾಧುಗಳಿಗೆ ಗೌರವಪೂರ್ವಕವಾಗಿ 5,000 ರೂ. ಹಣವನ್ನು ನೀಡಿದ್ದಾರೆ. ಇದನ್ನೇ ದಾಳವಾಗಿ ಬಳಸಿಕೊಂಡ ಸಾಧುವೇಷಧಾರಿಗಳು ಕೈ ಸವರಿ ನಂತರ ಪರಿಮಳ ತೆಗೆದುಕೊಳ್ಳಲು ತಿಳಿಸಿದ್ದಾರೆ. ಬಳಿಕ ನಡೆದಿದ್ದೆಲ್ಲಾ ಆಶ್ಚರ್ಯಕರ ಬೆಳವಣಿಗೆ.
ರುದ್ರಾಕ್ಷಿ ವಿಭೂತಿ ನೀಡಿದಾಗ ಸಂತೋಷ್ ಅವರು ತನಗರಿವಿಲ್ಲದೇ ಸಾಧುವೇಷಧಾರಿಗಳಿಗೆ 51 ಸಾವಿರ. ರೂ. ನೀಡಿದ್ದು, ಹೀಗೆ ಒಟ್ಟು 81 ಸಾವಿರ ರೂ. ನೀಡಿದ್ದಾರೆ. ಎಳನೀರು ಸೇವಿಸಿ ನಿನಗೆ ಏನಾದರೂ ಸಮಸ್ಯೆ ಉಂಟಾದಲ್ಲಿ ನಮಗೆ ಕರೆ ಮಾಡುವಂತೆ ಒಂದು ಮೊಬೈಲ್ ಸಂಖ್ಯೆಯನ್ನು ನೀಡಿ ಹೋಗಿದ್ಧಾರೆ. ಸಾಧುವೇಷಧಾರಿಗಳು ಹೋದ ಅರ್ಧ ಗಂಟೆಯ ಬಳಿಕ ತಾನು ಮೋಸ ಹೋಗಿರುವುದಾಗಿ ತಿಳಿದಿದ್ದು, ಈ ಬಗ್ಗೆ ಮನೆಮಂದಿಗೆ ವಿಚಾರ ತಿಳಿಸಿದ್ದಾರೆ.
ಸಾಧುವೇಷಧಾರಿಗಳು ನೀಡಿದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ವೇಳೆ ಕರೆ ಸ್ವೀಕರಿಸಿದ್ದು, ಈ ವೇಳೆ ನಾಜೂಕಿನ ಮಾತುಗಳನ್ನಾಡಿದ್ದಾರೆ. ಘಟನೆಯ ಬಗ್ಗೆ ಠಾಣೆಗೆ ದೂರು ನೀಡಿದ್ದಾರೆ.
ಕಳೆದ ವರ್ಷ ಹೊಟೇಲ್ ಮಾಲಕರೊಬ್ಬರು ಇದೇ ರೀತಿಯಾಗಿ 16 ಸಾವಿರ ರೂ. ಕಳೆದುಕೊಂಡಿದ್ದು ಹಾಗೂ ಇನ್ನೋರ್ವರು 3,000 ಕಳೆದುಕೊಂಡ ಬಗ್ಗೆ ಮಾಹಿತಿ ದೊರೆತಿದೆ.
ಈ ವಿಚಾರದ ಬಗ್ಗೆ ಹೆಚ್ಚಿನ ಮಂದಿ ಪೊಲೀಸ್ ದೂರು ನೀಡದೇ ಇರುವ ಕಾರಣ ಈ ರೀತಿಯಾದ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾಗಿ ಈ ಬಗ್ಗೆ ಸಾರ್ವಜನಿಕರು ನಿರ್ಲಕ್ಷ್ಯ ವಹಿಸಬಾರದು. ಎಚ್ಚರಿಕೆ ವಹಿಸಬೇಕು. ಈ ರೀತಿಯ ಘಟನೆ ನಡೆದಲ್ಲಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಪೊಲೀಸರು ತಿಳಿಸಿದ್ದಾರೆ.