ಮಂಗಳೂರು, ಜು. 18 (DaijiworldNews/SM): ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಬಸ್ಸಿನಲ್ಲಿ ಸಂಚರಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣಕ್ಕೆ ಪೂರ್ವ ವಲಯ ಬಸ್ ಮಾಲಕರ ಒಕ್ಕೂಟ ಮತ್ತು ಕರಾವಳಿ ವಲಯ ಬಸ್ಸು ಮಾಲಕರ ಒಕ್ಕೂಟ ವ್ಯವಸ್ಥೆ ಮಾಡಿದ್ದು, ವಿದ್ಯಾರ್ಥಿಗಳು ಪ್ರವೇಶಪತ್ರ ತೋರಿಸಿ ಈ ವ್ಯಾಪ್ತಿಯ ಬಸ್ಸುಗಳಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸಬಹುದು ಎಂದು ಪೂರ್ವ ವಲಯ ಬಸ್ಸು ಮಾಲಕರ ಒಕ್ಕೂಟದ ಅಧ್ಯಕ್ಷ ಶೇಷಪ್ಪ ಶೆಟ್ಟಿ ತಿಳಿಸಿದರು.
ದೇರಳಕಟ್ಟೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜು. 19 ಮತ್ತು ಜು. 22ರಂದು ನಡೆಯುವ ಎಸ್ಎಸ್ಎಲ್ಸಿ ಪರೀಕ್ಷಗೆ ವಿಟ್ಲ, ಕನ್ಯಾನ, ಮಂಜನಾಡಿ ಮುಡಿಪು, ಹರೇಕಳ, ಪಾವೂರು ಕೊಣಾಜೆ ವ್ಯಾಪ್ತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆಯಾಗಿ ತೊಕ್ಕೊಟ್ಟುವಿನಿಂದ ಮಂಗಳೂರಿಗೆ ಸಂಚರಿಸುವ ಪೂರ್ವ ವಲಯ ಮತ್ತು ಸ್ಟೇಟ್ಬ್ಯಾಂಕ್ ಮತ್ತು ಮಂಗಳಾದೇವಿಯಿಂದ ಹೊರಟು ಲಾಲ್ ಭಾಗ್, ಕೂಳೂರು, ಬೈಕಂಪಾಡಿ, ಸುರತ್ಕಲ್, ಕಾಟಿಪಳ್ಳ ಕಡೆಗೆ ಸಂಚರಿಸುವ ಕರಾವಳಿ ವಲಯದ ಬಸ್ಸುಗಳಲ್ಲಿ ಈ ಆವಕಾಶ ಕಲ್ಪಿಸಲಾಗಿದೆ.
ಕೋವಿಡ್ -19ರ ಸಾಂಕ್ರಾಮಿಕ ರೋಗದ ಹಾವಳಿಯಿಂದ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ವ್ಯವಸ್ಥೆ ಕಲ್ಪಿಸಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಪೂರ್ವ ವಲಯ ಬಸ್ಸು ಮಾಲಕರ ಒಕ್ಕೂಟದ ಮಾಜಿ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ, ಪ್ರಧಾನ ಕಾರ್ಯದರ್ಶಿ ಅನೀಸ್ ಶೆಟ್ಟಿ, ಕರಾವಳಿ ವಲಯದ ಅಧ್ಯಕ್ಷ ಅಶೋಕ್ ಅಶೆಲ್, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಶಿಫಾಲಿ ಉಪಸ್ಥಿತರಿದ್ದರು.