ಉಡುಪಿ, ಜು. 18 (DaijiworldNews/SM): ಇಲ್ಲಿನ ರಥಬೀದಿಯಲ್ಲಿ ಸಿನಿಮಾ ಶೈಲಿಯಲ್ಲಿ ಅಪಹರಣ ನಡೆದಿದ್ದು, ಉದ್ಯಮಿಯೊಬ್ಬರನ್ನು ಕರೆದೊಯ್ದ ದುಷ್ಕರ್ಮಿಗಳು ಸುಮಾರು 1.99 ಲಕ್ಷ ರೂಪಾಯಿ ದರೋಡೆ ನಡೆಸಿರುವ ಬಗ್ಗೆ ಜುಲೈ 18ರ ರವಿವಾರ ವರದಿಯಾಗಿದೆ.
ಇಲ್ಲಿನ ಗ್ಲೋಬಲ್ ಟೈಮ್ ಟ್ರೇಡರ್ಸ್ ಕಚೇರಿಯ ಅಶೋಕ್ ಕುಮಾರ್ ಎಂಬವರನ್ನು ದುಷ್ಕರ್ಮಿಗಳು ಅಪಹರಣ ನಡೆಸಿದ್ದಾರೆ. ವ್ಯವಹಾರದ ಮಾತುಕತೆಯ ಹೆಸರಿನಲ್ಲಿ ಇನ್ನೊವಾ ಕಾರಿನಲ್ಲಿ ಕರೆದೊಯ್ದು ಕಿಡ್ನ್ಯಾಪ್ ನಡೆಸಲಾಗಿದೆ. ಆರಂಭದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬರೋಬ್ಬರಿ 70 ಲಕ್ಷ ರೂ.ಗೆ ಬೇಡಿಕೆ ಇಡಲಾಗಿದೆ. ಬಳಿಕ ರೆಸಾರ್ಟ್ ಒಂದರಲ್ಲಿ ಕೂಡಿ ಹಾಕಲಾಗಿತ್ತು. ಜುಲೈ 17ರಂದು ಆರೋಪಿಗಳು ಅಶೋಕ್ ಅವರನ್ನು ಉಡುಪಿಗೆ ಕರೆ ತಂದಿದ್ದಾರೆ. ಬ್ಯಾಂಕಿನಿಂದ ಬಲವಂತವಾಗಿ ಹಣ ಪಡೆಯಲು ಕರೆತರಲಾಗಿತ್ತು. ಈ ವೇಳೆ ಹಣ ಪಡೆಯಲು ತೆರಳಿದ ಸಂದರ್ಭ ಅಶೋಕ್ ಅವರು ಬೊಬ್ಬೆ ಹಾಕಿದ ಪರಿಣಾಮ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಇನ್ನು ಆರೋಪಿಗಳು ಬರೋಬ್ಬರಿ1,99,500 ರೂ. ನಗದು, 2 ಮೊಬೈಲ್ ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಅಶೋಕ್ ಕುಮಾರ್ ಮೂಲತಃ ತುಮಕೂರಿನವರು. ಉಡುಪಿಯಲ್ಲಿ ಉದ್ಯಮ ನಡೆಸುತ್ತಿದ್ದರು. ಕಳೆದ ನಾಲ್ಕು ತಿಂಗಳುಗಳಿಂದ ಶೇರು ಮಾರುಕಟ್ಟೆ ವ್ಯವಹಾರ ಕೂಡ ಮಾಡುತ್ತಿದ್ದರು ಎಂಬುವುದಾಗಿ ಮಾಹಿತಿ ಲಭಿಸಿದೆ.