ಮಂಗಳೂರು, ಜು. 18 (DaijiworldNews/SM): ರಾಜ್ಯದಲ್ಲಿ ಅನ್ ಲಾಕ್ ಪ್ರಕ್ರಿಯೆ ಜಾರಿಗೊಳಿಸಲಾಗಿದ್ದು, ಈ ನಿಯಮ ದ.ಕ. ಜಿಲ್ಲೆಗೂ ಅನ್ವಯವಾಗಲಿದ್ದು, ಜಿಲ್ಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ದೈಜಿವರ್ಲ್ಡ್ ಗೆ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಕಾಲೇಜು ಪ್ರಾರಂಭಿಸಲು ಗ್ರೀನ್ ಸಿಗ್ನಲ್ ನೀಡಲಾಗಿದ್ದು, ಜುಲೈ 26ರಿಂದ ಡಿಗ್ರಿ ಕಾಲೇಜುಗಳು ಓಪನ್ ಆಗಲಿವೆ. ದ.ಕ. ಜಿಲ್ಲೆಯಲ್ಲೂ ಜುಲೈ 26ರಿಂದ ಕಾಲೇಜುಗಳು ಆರಂಭಿಸಲು ನಿರ್ಧರಿಸಲಾಗಿದೆ. ಆದರೆ, ವಿದ್ಯಾರ್ಥಿಗಳಿಗೆ ಲಸಿಕೆ ಕಡ್ಡಾಯಗೊಳಿಸಲಾಗಿದೆ. ವಿದ್ಯಾರ್ಥಿಗಳು ಕನಿಷ್ಠ 1 ಡೋಸ್ ಲಸಿಕೆ ಪಡೆದಿರಬೇಕು ಎನ್ನುವ ವಿಚಾರ ಸ್ಪಷ್ಟಪಡಿಸಲಾಗಿದೆ.
ಜುಲೈ 19ರಿಂದ ಸಿನಿಮಾ ಮಂದಿರಗಳು ಓಪನ್ ಆಗಲಿದ್ದು, ಸಿನಿಮಾ ಮಂದಿರಗಳಲ್ಲಿ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ಸಿನಿಮಾ ವೀಕ್ಷಣೆಗೆ ಅನುಮತಿ ನೀಡಲಾಗಿದೆ. ಇನ್ನು ನೈಟ್ ಕರ್ಫ್ಯೂ ಸಮಯದಲ್ಲಿ ಕೂಡ ಬದಲಾವಣೆ ಮಾಡಲಾಗಿದ್ದು, ರಾತ್ರಿ 10ರಿಂದ ಬೆಳಗ್ಗೆ 5ರ ತನಕ ಮಾತ್ರ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ.
ಇನ್ನು ಮದುವೆಗಳಿಗೆ ವಿಧಿಸಿದ ನಿರ್ಬಂಧ ಮುಂದುವರಿಯಲಿದೆ. ಮದುವೆ ಸಮಾರಂಭದಲ್ಲಿ 100 ಜನರಿಗಷ್ಟೇ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಅಂತ್ಯ ಸಂಸ್ಕಾರದಲ್ಲಿ 20 ಜನ ಮಾತ್ರ ಅನುಮತಿ ನೀಡಲಾಗಿದೆ.
ದೇವಸ್ಥಾನಗಳಲ್ಲಿ ಪ್ರಸಾದ ವಿತರಣೆ, ಅನ್ನ ಸಂತರ್ಪನೆ, ವಿಶೇಷ ಪೂಜೆ, ಹರಕೆ ತೀರಿಸಲು ಅವಕಾಶ ಕಲ್ಪಿಸಲಾಗಿದೆ.