ಕಾರ್ಕಳ, ಜು 18 (DaijiworldNews/PY): ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸ್ವರ್ಣ ನದಿ ತುಂಬಿ ಹರಿಯುತ್ತಿದೆ. ದುರ್ಗ ಗ್ರಾಮದ ಮುಂಡ್ಲಿ ಬಲ್ಮೆಗುಂಡಿಯಲ್ಲಿ ನಿರ್ಮಾಣಗೊಂಡಿರುವ ಕಿಂಡಿಅಣೆಕಟ್ಟಿಗೆ ಅಳವಡಿಸಿದ ಸ್ವಯಂ ಚಾಲಿತ ಗೇಟ್ ಅನ್ನು ತೆರವುಗೊಳಿಸಿರುವುದರಿಂದ ಮಳೆ ನೀರು ಹೊರ ಹರಿದು ಹೋಗಿರುವುದರಿಂದ ಕಳೆದ ಕೆಲ ವರ್ಷಗಳಿಂದ ಇದೇ ಪರಿಸರದಲ್ಲಿ ಎದುರಾಗುತ್ತಿದ್ದ ಕೃತಕ ನೆರೆಗೆ ಮುಕ್ತಿ ದೊರೆತಿದೆ.
ನಗರ ಪ್ರದೇಶಕ್ಕೆ ಕುಡಿಯುವ ನೀರು:
ಮುಂಡ್ಲಿಯ ಸ್ವರ್ಣ ನದಿಯಿಂದ ಕಾರ್ಕಳ ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಬರೀ ಮಳೆ ಎದುರಾಗುವ ದಿನಗಳಲ್ಲಿ, ವಿದ್ಯುತ್ ಅಭಾವದ ದಿನಗಳಲ್ಲಿ, ಕಡು ಬೇಸಿಗೆಯ ಸಂದರ್ಭದಲ್ಲಿ ಇಲ್ಲಿಂದ ನೀರು ಸರಬರಾಜು ಮಾಡಲು ಸಾಧ್ಯವಾಗದೇ ರಾಮಸಮುದ್ರದಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ.
ಮುನ್ನೆಚ್ಚರಿಕೆ ವಹಿಸಿದ ಗ್ರಾಮ ಪಂಚಾಯತ್:
ದುರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಬಲ್ಮಗುಂಡಿಯಲ್ಲಿ ಸ್ವರ್ಣ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದ್ದ ಕಿಂಡಿಅಣೆಕಟ್ಟನ್ನು ಉನ್ನತೀಕರಿಸಿ ವಿದ್ಯುತ್ ಉತ್ಪಾದನ ಘಟಕ ಸ್ಥಾಪಿಸಿದ ಬಳಿಕ ಆ ಪರಿಸರದಲ್ಲಿ ಕೃತಕ ನೆರೆ ಉಂಟಾಗುತ್ತಿದ್ದು, ಪರಿಣಾಮವಾಗಿ ಕೃಷಿ ಭೂಮಿಗಳು ಜಲಾವೃತಗೊಳ್ಳುತ್ತಿತ್ತು. ಪರಿಣಾಮವಾಗಿ ಕೃಷಿ ನಾಶವಾಗುತ್ತಿತ್ತು.
ಇದನ್ನು ಮನಗಂಡಿರುವ ದುರ್ಗ ಗ್ರಾಮ ಪಂಚಾಯತ್ನ ಅಧ್ಯಕ್ಷ ಸತೀಶ್ ಸತೀಶ್ ನಾಯಕ್ ನೇತೃತ್ವದ ನಿಯೋಗವು ಪುರಸಭಾ ಮುಖ್ಯಾಧಿಕಾರಿಯವರಿಗೆ ಮನವಿ ಸಲ್ಲಿಸಿ ಮಳೆಗಾಲ ಆರಂಭಕ್ಕೂ ಮುನ್ನಾ ಮುಂಡ್ಲಿ ಕಿಂಡಿಅಣೆಕಟ್ಟಿಗೆ ಅಳವಡಿಸಲಾಗಿದ್ದ ಸ್ವಯಂ ಚಾಲಿತ ಗೇಟ್ ನ್ನು ತೆರವುಗೊಳಿಸಿ ಕೃತಕ ನೆರೆಗೆ ಮುಕ್ತಿಗೆ ಕೋರಲಾಗಿತ್ತು.
ಅಪಾಯ ಸ್ಥಿತಿಯಲ್ಲಿದೆ ಮುಂಡ್ಲಿ ಸೇತುವೆ:
ಗ್ರಾಮೀಣ ಭಾಗದ ಜನ ಸಂಚಾರದ ಕೊಂಡಿಯಾಗಿರುವ ಮುಂಡ್ಲಿ ಸೇತುವೆಯು 1994ರ ಬಳಿಕ ತೀರಾ ಅಪಾಯ ಸ್ಥಿತಿಗೆ ತಲುಪಿದೆ. ಅಣೆಕಟ್ಟು ನಿರ್ಮಾಣ, ವಿದ್ಯುತ್ ಘಟಕ ಸ್ಥಾಪನೆಯ ಸಂದರ್ಭದಲ್ಲಿ ಕರಿಬಂಡೆಯನ್ನು ಛಿದ್ರಗೊಳಿಸುವ ಉದ್ದೇಶದಿಂದ ಬಳಸಲಾಗಿದ್ದ ಭಾರೀ ಪ್ರಮಾಣದ ಸ್ಪೋಟಕಗಳಿಂದಾಗಿ ಸೇತುವೆಯ ಮೇಲೂ ದುಷ್ಪರಿಣಾಮ ಬೀರುವಂತೆ ಮಾಡಿದೆ.
ಸೇತುವೆಯ ಆಧಾರ ಸ್ತಂಭಗಳಿಗೆ ಅಳವಡಿಸಲಾಗಿದ್ದ ಕಾಂಕ್ರೀಟ್ ಕಳಚಿಕೊಂಡಿರುವುದಟ್ದ ಕಬ್ಬಿಣ ಸರಳುಗಳು ಹೊರ ಚಾಚಿಕೊಂಡಿವೆ. ಘನ ವಾಹನ ಈ ಸೇತುವೆ ಮೇಳೆ ಹಾದು ಹೋಗುವ ಸಂದರ್ಭದಲ್ಲಿ ಸೇತುವೆ ಕಂಪನವಾಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಸೇತುವೆಯ ಇಕ್ಕೆಲೆಗಳ ಇರುವ ಆಧಾರಗೋಡೆ ಅಲ್ಲಲ್ಲಿ ಕಳಚಿಕೊಂಡಿವೆ. ಸೇತುವೆಯ ಮೇಲ್ಪದರು ಅಲ್ಲಲ್ಲಿ ಕಿತ್ತು ಹೋಗಿದೆ.
ಮಳೆಗಾಲದಲ್ಲಿ ಮುಂಡ್ಲಿ ಅಣೆಕಟ್ಟಿನಿಂದ ಹೊರಬಿಡಲಾಗುವ ನೀರು ಪ್ರವಾಹವು ಸೇತುವೆಯ ಆಧಾರದ ಕಂಬಕ್ಕೆ ಅಪ್ಪಳಿಸುವುದರಿಂದ ಸೇತುವೆಯ ಕಂಬಗಳ ತಳಭಾಗವು ದುರ್ಬಲವಾಗುತ್ತಾ ಹೋಗಿದೆ.