ಬೆಳ್ತಂಗಡಿ, ಜು 18 (DaijiworldNews/PY): ಓಮ್ನಿ ಕಾರೊಂದು ಇದ್ದಕ್ಕಿಂದ್ದಂತೆ ಚಲಿಸಿ ಅಪಘಾತ ಸಂಭವಿಸಿದ್ದು, ಈ ವೇಳೆ ಇಬ್ಬರು ವಿದ್ಯಾರ್ಥಿನಿಯರು ಹಾಗೂ ಮಗು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಉಜಿರೆಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಬಳಿ ನಡೆದಿದೆ.
ಓಮ್ನಿಯ ಚಾಲಕ ಮಗುವನ್ನು ಕಾರಿನೊಳಗೆ ಬಿಟ್ಟು ಬೇರೆಡೆಗೆ ತೆರಳಿದ್ದ ಈ ವೇಳೆ ಆತ ಹ್ಯಾಂಡ್ಲಾಕ್ ಕೂಡಾ ಮಾಡಿರಲಿಲ್ಲ. ಈ ಸಂದರ್ಭ ಮಗು ಏನು ಮಾಡಿತೋ, ಇಲ್ಲವೋ ಎಂದು ಖಚಿತವಾಗಿಲ್ಲ. ಆದರೆ, ಸ್ವಲ್ಪ ಹೊತ್ತಿನ ಬಳಿಕ ಕಾರು ಇದ್ದಕ್ಕಿಂದ್ದಂತೆ ಮುಂದೆಕ್ಕೆ ಚಲಿಸಿ ಶಾರ್ವರಿ ಕಾಂಪ್ಲೆಕ್ಸ್ನಲ್ಲಿದ್ದ ತರಕಾರಿ ಅಂಗಡಿಯೊಳಗೆ ನುಗ್ಗಿದೆ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ವೇಳೆ ಇಬ್ಬರು ವಿದ್ಯಾರ್ಥಿನಿಯರು ಅಂಗಡಿಯಲ್ಲಿ ಖರೀದಿಯಲ್ಲಿ ತೊಡಗಿದ್ದರು. ಆದರೆ, ಅಂಗಡಿಯತ್ತ ಕಾರು ನುಗ್ಗುತ್ತಿದ್ದಂತೆ ಹಿಂದಿರುಗಿ ನೋಡಿದ ವಿದ್ಯಾರ್ಥಿನಿಯರು ಕೂಡಲೆ ಪಕ್ಕಕ್ಕೆ ಸರಿದುಕೊಂಡಿದ್ದು, ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಅದೃಷ್ಟವಶಾತ್ ಕಾರಿನೊಳಗಿದ್ದ ಮಗು ಕೂಡಾ ಪ್ರಾಣಾಪಾಯದಿಂದ ಪಾರಾಗಿದೆ.