ಉಡುಪಿ, ಜು.18 (DaijiworldNews/HR): ಕಳೆದ ರಾತ್ರಿಯಿಂದ ಜಿಲ್ಲೆಯಾದ್ಯಂತ ಭಾರಿ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಕೆಲವೆಡೆ ಕೃತಕ ನೆರೆ ಹಾವಳಿ ಉಂಟಾಗಿದೆ.
ಉಡುಪಿಯ ಕಾಪು, ಮಜೂರು, ಮಠದ ಬೆಟ್ಟು, ಕಲ್ಸಂಕ ಸೇರಿದಂತೆ ಹಲವೆಡೆ ಮನೆಗೆ ನೀರು ನುಗ್ಗಿದ್ದು, ನದಿ ತೀರದ ಪ್ರದೇಶಗಳಲ್ಲಿ ಕಟ್ಟೆಚ್ಚರ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಲಾಗಿದೆ.
ಜಿಲ್ಲೆಯಲ್ಲಿ ನದಿಗಳು ಉಕ್ಕಿ ಹರಿಯುತ್ತಿದ್ದು,ಜನಜೀವನ ಅಸ್ತವ್ಯಸ್ತವಾಗಿದ್ದು, ಇಂದು ನಾಳೆ ಭಾರೀ ಮಳೆ ಬಗ್ಗೆ ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ ಎನ್ನಲಾಗಿದೆ.
ಇನ್ನು ಕಾಲಿಗೆ ಬ್ಯಾಂಡೆಜ್ ಸುತ್ತಿದ ಕಾರಣ ನಡೆಲಾಗದ ಸ್ಥಿತಿಯಲ್ಲಿ ಇದ್ದ ಮಹಿಳೆಯೊಬ್ಬರನ್ನು ಕುರ್ಚಿಯಲ್ಲಿ ಹೊತ್ತು ಸುರಕ್ಷಿತ ಪ್ರದೇಶಕ್ಕೆ ಯುವಕರು ಸಾಗಿಸಿದ ಘಟನೆ ಕಾಪುವಿನಲ್ಲಿ ನಡೆದಿದೆ.
ನಗರದ ಕೃಷ್ಣ ಮಠ ಪಾರ್ಕಿಂಗ್ ಪ್ರದೇಶ, ಬೈಲಕೆರೆ, ನಿಟ್ಟೂರು, ಮತ್ತು ಇತರ ಕೆಲವು ಪ್ರದೇಶಗಳಲ್ಲಿ ಮನೆಯ ಒಳಗೆ ನೀರು ನುಗಿದ್ದು ಸ್ಥಳೀಯವಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಪೋಲಿಸ್ ಸಿಬ್ಬಂದಿಗಳು ಈಗಾಗಲೇ ಹಲವಾರು ಪ್ರದೇಶಗಳಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿದ್ದು ಜನರಿಗೆ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ.
ನಗರದ ಹಲವೆಡೆ ಮ್ಯಾನ್ ಹೋಲ್ ಗಳಲ್ಲಿ ನೀರು ತುಂಬಿ ಕೊಳಚೆ ನೀರು ರಸ್ತೆಯ ಮೇಲೆಯೇ ಹರಿದು ಹೋಗುತ್ತಿರುವುದು ಕೂಡಾ ಕಂಡು ಬಂದಿದೆ.