ಬಂಟ್ವಾಳ: ಜು.18 (DaijiworldNews/HR): ಕಳೆದ ಕೆಲವು ದಿನಗಳಿಂದ ಅವ್ಯಾಹತವಾಗಿ ಸುರಿಯುತ್ತಿರುವ ಮಳೆಗೆ ಶನಿವಾರ ರಾತ್ರಿ ಬಿ.ಸಿ.ರೋಡ್- ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಳಗಿನ ವಗ್ಗ, ಆಲಂಪುರಿ ಕ್ರಾಸ್ ಬಳಿ ರಸ್ತೆ ಬದಿಯ ಗುಡ್ಡ ಜರಿದು ಸುಮಾರು 50 ಕ್ಕೂ ಹೆಚ್ಚು ಅಡಿಕೆ ಮರಗಳು ಧರಾಶಾಯಿಯಾಗಿದೆ.
ಈ ಜಾಗ ಇಲ್ಲಿನ ಸ್ಟ್ಯಾನಿ ಲೋಬೋ ಅವರಿಗೆ ಸೇರಿದ್ದು, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ವೇಳೆ ಅವೈಜ್ಞಾನಿಕವಾಗಿ ರಸ್ತೆ ಬದಿಯ ಗುಡ್ಡವನ್ನು ಅಗೆದಿರುವುದೇ ಜರಿತಕ್ಕೆ ಕಾರಣವೆಂದು ಆರೋಪಿಸಿದ್ದಾರೆ.
ಈಗಾಗಲೇ ರಸ್ತೆ ಇನ್ನೊಂದು ಬದಿಯಲ್ಲಿದ್ದ ಮನೆಯನ್ನು ಹೆದ್ದಾರಿ ಕಾಮಗಾರಿ ವೇಳೆ ತೆರವುಗೊಳಿಸಿದ್ದು, ತೋಟದ ಭಾಗದ ಜಾಗದಲ್ಲಿದ್ದ ಬಂಡೆಯನ್ನು ಒಡೆದು ಹಾಕಿದ್ದಾರೆ. ರಸ್ತೆ ಬದಿ ತಡೆಗೋಡೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದು ಇನ್ನೂ ನಿರ್ಮಿಸಿಲ್ಲ. ಇದೀಗ ತೋಟಕ್ಕೆ ಹಾನಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.