ಮಂಗಳೂರು, ಜು.17 (DaijiworldNews/HR): ಬಂದರ್ನ ನಲಪಾಡ್ ಕುನಿಲ್ ಟವರ್ಸ್ಗೆ ಹೊಂದಿಕೊಂಡಂತಿರುವ ಎಪಿಎಂಸಿ ಯಾರ್ಡ್ನ ತಡೆಗೋಡೆ ಕುಸಿದು 13ಕ್ಕೂ ಅಧಿಕ ವಾಹನಗಳು ಜಖಂಗೊಂಡ ಘಟನೆ ಶನಿವಾರ ಸಂಜೆ ನಡೆದಿದೆ.
ಅಪಾರ್ಟ್ಮೆಂಟ್ನಲ್ಲಿ ನೂರಕ್ಕೂ ಹೆಚ್ಚು ಫ್ಲಾಟ್ಗಳಿದ್ದು, ಬಹುತೇಕ ಮಕ್ಕಳು ಕಟ್ಟಡದ ಆವರಣದಲ್ಲಿ ಆಟ ಆಡುತ್ತಿದ್ದರು. ಅದೃಷ್ಟವಶಾತ್ ಶನಿವಾರ ಸಂಜೆ ವೇಳೆ ಮಳೆ ಬರುತ್ತಿದ್ದರಿಂದ ಮಕ್ಕಳು ಹೊರಬಂದಿಲ್ಲ. ಇದರಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ.
ಕರಾವಳಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಜೊತೆಗೆ ಎಪಿಎಂಸಿ ಯಾರ್ಡ್ನ ತಡೆಗೋಡೆಯೂ ಸಂಪೂರ್ಣವಾಗಿ ಸಿಥಿಲಗೊಂಡಿದೆ. ಇದರಿಂದ ಸಂಜೆ 4:30ರ ಸುಮಾರಿಗೆ ತಡೆಗೋಡೆ ಕುಸಿದಿದ್ದು, ತಡೆಗೋಡೆಯ ಅವಶೇಷಗಳು ನಲಪಾಡ್ ಟವರ್ಸ್ನ ಕಾಂಪೌಂಡ್ನ್ನು ಸೇರಿದಂತೆ ಆವರಣದುದ್ದಕ್ಕು ಹರಡಿಕೊಂಡಿದೆ.
ಘಟನೆಯಲ್ಲಿ 13ಕ್ಕೂ ಹೆಚ್ಚು ವಾಹನಗಳು ತಡೆಗೋಡೆಯ ಅವಶೇಷಗಳ ಅಡಿಯಲ್ಲಿ ಹೂತು ಹೋಗಿದ್ದು, ಅಲ್ಲದೆ ಕಟ್ಟಡದ ಆವರಣದಲ್ಲಿದ್ದ ನೀರಿನ ಬಾವಿಯಲ್ಲಿ ಅರ್ಥ ಭಾಗದಷ್ಟು ಅವಶೇಷಗಳಿಂದ ತುಂಬಿಹೋಗಿದೆ. ಬಾವಿಯ ನೀರು ಕುಡಿಯಲು ಯೋಗ್ಯವಲ್ಲದಂತಾಗಿದೆ. ಸುಮಾರು ಒಂದೂವರೆ ಅಡಿ ಅಗಲ, 25 ಅಡಿ ಎತ್ತರ ಹಾಗೂ 100 ಅಡಿಗೂ ಹೆಚ್ಚು ಉದ್ದದ ತಡೆಗೋಡೆ ಧರಾಶಾಹಿಯಾಗಿದೆ. ಎಪಿಎಂಸಿ ಯಾರ್ಡ್ನಲ್ಲಿ ತಡೆಗೋಡೆಗೆ ಆತುಕೊಂಡಂತೆ ಸ್ಮಾರ್ಟ್ಸಿಟಿ ಕಾಮಗಾರಿಯ ಅವಶೇಷ ತಂದು ಸುರಿಯಲಾಗುತ್ತಿದೆ. ಇದರಿಂದಾಗಿಯೇ ಗೋಡೆ ಕುಸಿದಿದೆ ಎಂದು ಅಪಾರ್ಟ್ಮೆಂಟ್ನ ನಿವಾಸಿಗಳು ತಿಳಿಸಿದ್ದಾರೆ.