ಕುಂದಾಪುರ, ಜು 17 (DaijiworldNews/PY): ಬೈಂದೂರು ತಾಲೂಕಿನ ಖಂಬದಕೋಣೆ ಗ್ರಾಮಪಂಚಾಯತ್ ವ್ಯಾಪ್ತಿಯ ಹಳಗೇರಿ ಸರ್ವೇ ನಂ. 166/ಪಿ1 ಗೋವಿನಗುಡ್ಡವನ್ನು ಕೈಗಾರಿಕಾ ವಲಯ ಮಾಡಲು ವಿರೋಧ ವ್ಯಕ್ತಪಡಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶನಿವಾರದಂದು ನಾಲ್ಕೈದು ಗ್ರಾಮಗಳ ಗ್ರಾಮಸ್ಥರು ಗ್ರಾಮಪಂಚಾಯತಿ ಎದುರು ಧರಣಿ ನಡೆಸಿದರು.
ಕಾಡು ಉಳಿಸಿ, ಬದುಕಲು ಬಿಡಿ:
ಹಳಗೇರಿ ದೇವಸ್ಥಾನದ ಬಳಿಯಿಂದ ಸಾಗಿಬಂದ ಪ್ರತಿಭಟನಾ ಮೆರವಣಿಗೆಯಲ್ಲಿ ಹಳಗೇರಿ, ತೆಂಕಬೆಟ್ಟು, ಗುಮ್ಮಿತೋಟ, ಖಂಬದಕೋಣೆ ಹಾಗೂ ನಾಗೂರು ಗ್ರಾಮಸ್ಥರಿದ್ದು ಖಂಬದಕೋಣೆ ಗ್ರಾ.ಪಂ ಎದುರು 'ಅರಣ್ಯ ಉಳಿಸಿ' ಆಂದೋಲನಕ್ಕೆ ಮುಂದಾದರು. ಸ್ಥಳೀಯರಿಗೆ ಮಾಹಿತಿ ನೀಡದೇ, ಸಾಧಕ-ಬಾಧಕ ಚರ್ಚಿಸದೇ ಕೈಗಾರಿಕಾ ವಲಯ ಮಾಡಲು ಹೊರಟಿರುವುದು ಜನವಿರೋಧಿ ನೀತಿಯಾಗಿದೆ. ನಮ್ಮಲ್ಲಿ ಯಾವುದೇ ಕೈಗಾರಿಕೆ ನಡೆಸಲು ಬಿಡುವುದಿಲ್ಲ. ಇದರಿಂದ ಎಕ್ರೆಗಟ್ಟಲೇ ವಿಸ್ತೀರ್ಣದ ಕಾಡು ನಾಶವಾಗಲಿದ್ದು ಕಾಡನ್ನೇ ನಂಬಿ ಕೃಷಿ ಚಟುವಟಿಕೆಗಳನ್ನು ನಡೆಸಲಾಗುತ್ತಿರುವ ನಮ್ಮಂತ ಬಡ ಜನರ ಮೇಲೆ ದಬ್ಬಾಳಿಕೆ ಸರಿಯಲ್ಲ. ಒಂದೊಮ್ಮೆ ಕೈಗಾರಿಕ ವಲಯವಾದರೆ ಅರಣ್ಯ ನಾಶದ ಜೊತೆ, ಕಾಡು ಪ್ರಾಣಿಗಳಿಗೂ ತೊಂದರೆಯಾಗಲಿದೆ, ಮಾತ್ರವಲ್ಲ ಅಂತರ್ಜಲ ಮಟ್ಟ ಕುಸಿಯುವುದಲ್ಲದೆ, ಭೂ ಕುಸಿತ ಭೀತಿಯಿದೆ. ನಮಗೆ ನಮ್ಮ ಕಾಡು ಬೇಕು,ಕಾಡನ್ನು ಉಳಿಸಿ ನಮ್ಮನ್ನು ಬದುಕಲು ಬಿಡಿ. ಅರಣ್ಯ ನಾಶಕ್ಕೆ ಅವಕಾಶ ನೀಡದಿರಿ ಎಂಬ ಒಕ್ಕೊರಲ ಆಗ್ರಹ ಈ ವೇಳೆ ಕೇಳಿಬಂತು. ಗ್ರಾಮಸ್ಥರಾದ ವೆಂಕಪ್ಪ ಶೆಟ್ಟಿ, ರಾಜೇಂದ್ರ ಗಾಣಿಗ, ಸುಬ್ಬಣ್ಣ ಶೆಟ್ಟಿ ಮೊದಲಾದವರು ಹೇಳಿದರು.
ಹಳಗೇರಿ ಶ್ರೀ ವನದುರ್ಗಾ ರೈತಶಕ್ತಿ ಗುಂಪು (ರಿ.) ಸಂಯೋಜಕ ಯು. ಪ್ರಭಾಕರ ಶೆಟ್ಟಿ ಮಾತನಾಡಿ, "ಖಂಬದಕೋಣೆಯ ಹಳಗೇರಿಯಲ್ಲಿ ಸರ್ವೆ ನಂ. 166/ಪಿ1 ಗೋವಿನಗುಡ್ಡದ 66 ಎಕ್ರೆ ಜಾಗದಲ್ಲಿ 53 ಎಕ್ರೆ ಜಾಗವನ್ನು ಕೈಗಾರಿಕಾ ವಲಯವಾಗಿ ಮಾಡಲು ಸರಕಾರ ಹೊರಟಿರುವುದು ಖಂಡನೀಯ. ಈ ಸರ್ವೆ ನಂಬರ್ ಜಾಗವು ಕಂದಾಯ ಇಲಾಖೆಯದ್ದಾಗಿದ್ದು ಗ್ರಾ.ಪಂ.ಗೆ ಪರಂಬುಕು ಮಾಡಲಾಗಿದೆ. ಅರಣ್ಯ ಇಲಾಖೆ ಮೂಲಕ ಗ್ರಾ.ಪಂ ಗಿಡ ನೆಟ್ಟು ಇದೀಗಾ ದಟ್ಟ ಕಾಡು ಬೆಳೆದಿದೆ. ಈ ಅರಣ್ಯ ಕಡಿದು ಕೈಗಾರಿಕೆ ನಡೆಸಲು ಸರಕಾರ ನಿರ್ಧರಿಸಿದ್ದು ಗ್ರಾಮಸ್ಥರ ಅಭಿಪ್ರಾಯ ಪಡೆದಿಲ್ಲ. ಕೈಗಾರಿಕ ವಲಯವಾದಲ್ಲಿ ಈ ಅರಣ್ಯ ಪ್ರದೇಶದಲ್ಲಿ 250 ರೈತ ಕುಟುಂಬಗಳು ಬೀದಿಪಾಲಾಗಲಿದೆ. ಇನ್ನು ಅರಣ್ಯ ಪ್ರದೇಶದ ಗುಡ್ಡದ ಸುತ್ತ ಮುತ್ತ ವಸತಿ ಪ್ರದೇಶಗಳು, ಶಾಲೆ ಮೊದಲಾದವುಗಳಿದ್ದು ಶಬ್ದಮಾಲಿನ್ಯ, ವಾಯು ಮಾಲಿನ್ಯವಾಗುವ ಸಂಭವವಿದೆ. ಅಲ್ಲದೆ 150 ಮೀಟರಿಗೂ ಅಧಿಕ ಎತ್ತರವಿರುವ ಗುಡ್ಡ ಕಡಿದಲ್ಲಿ ಭೂ ಕುಸಿತ ಸಂಭವವಿದೆ. ಕಚೇರಿಯಲ್ಲಿ ಕುಳಿತ ಅಧಿಕಾರಿಗಳು ಈ ಪರಿಸರ ಹಾನಿ ಬಗ್ಗೆ ಕಾಳಜಿಯಿಲ್ಲದೆ ಇಂತಹ ನಿರ್ಧಾರ ಕೈಗೊಂಡಿದ್ದು ಇದನ್ನು ಕೈಬಿಡಬೇಕು" ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರು ಹಾಗೂ ಪಿಡಿಒ ಅವರಿಗೆ ಮನವಿ ನೀಡಲಾಯಿತು. ಖಂಬದಕೋಣೆ ಗ್ರಾಮಪಂಚಾಯತ್ ಅಧ್ಯಕ್ಷ ಸುಖೇಶ್ ಶೆಟ್ಟಿ, ಸದಸ್ಯ ರಾಜೇಶ್ ದೇವಾಡಿಗ, ಪಿಡಿಒ ಪೂರ್ಣಿಮಾ, ಗ್ರಾಮಲೆಕ್ಕಿಗ ಹನುಮಂತ ಮನವಿ ಸ್ವೀಕರಿಸಿದರು.
ಶ್ರೀ ವನದುರ್ಗಾ ರೈತಶಕ್ತಿ ಗುಂಪಿನ ಉಪಸಂಯೊಜಕ ರಾಮಕೃಷ್ಣ ಕಾರಂತ, ಶ್ರೀ ಕೊಕ್ಕೇಶ್ವರ ಭಜನಾ ಸಂಘ ರಿ. ಹಳಗೇರಿ ಅಧ್ಯಕ್ಷ ಶಂಕರ್ ದೇವಾಡಿಗ, ಸದಸ್ಯರಾದ ರಾಜೇಂದ್ರ ಗಾಣಿಗ, ಪ್ರವೀಣ್ ಶೆಟ್ಟಿ, ಗಂಗಾಧರ ದೇವಾಡಿಗ, ಸತೀಶ್ ಪೂಜಾರಿ, ನಾಗೇಂದ್ರ ಗಾಣಿಗ, ಶ್ರೀ ಬಸವೇಶ್ವರ ಭಜನಾ ಮಂದಿರ, ಶ್ರೀ ಕಾಲಬೈರವ ಸೇವಾ ಸಂಘ ತೆಂಕಬೆಟ್ಟು, ಹಳಗೇರಿ ಮುಸ್ಲೀಂ ಬಾಂಧವರು, ದಲಿತ ಸಂಘರ್ಷ ಸಮಿತಿ ಬೈಂದೂರು ವಲಯದಿಂದ ನರಸಿಂಹ ಹಳಗೇರಿ, ಮಂಜು ಹಳಗೇರಿ, ಶಿವರಾಮ್, ಸ್ತ್ರೀ ಶಕ್ತಿ ಸಂಘ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.