ಮಂಗಳೂರು, ಜು.17 (DaijiworldNews/HR): ಮಂಗಳೂರು ನಗರವು ಶಿಕ್ಷಣ ಕಾಶಿಯಾಗಿದ್ದು, 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಬೇರೆ ಬೇರೆ ಊರುಗಳಿಂದ ಬಂದು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಹಾಗಾಗಿ ಇಲ್ಲಿ ರ್ಯಾಗಿಂಗ್ ನಡೆಸಲು ಯಾವುದೇ ರೀತಿಯ ಅವಕಾಶಗಳನ್ನು ಕೊಡುವುದಿಲ್ಲ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಗರದ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಜೂನಿಯರ್ ವಿದ್ಯಾರ್ಥಿಯೊರ್ವನ ಮೇಲೆ ರ್ಯಾಗಿಂಗ್ ನಡೆಸಿದ್ದು, ಈ ಆರೋಪದ ಮೇಲೆ ಶುಕ್ರವಾರ ನ 6 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಜು.14 ರ ರಾತ್ರಿ 8 ಗಂಟೆಗೆ ದೂರದಾರ ವಿದ್ಯಾರ್ಥಿ ತನ್ನ ಸ್ನೇಹಿತರೊಂದಿಗೆ ಊಟಕ್ಕೆಂದು ಫಲ್ನೀರ್ನ ಫಿಲ್ ಫಿಲ್ ಹೋಟೆಲ್ ತೆರಳಿದ್ದಾಗ ಅಲ್ಲಿ ವಿದ್ಯಾರ್ಥಿಯ ಸೀನಿಯರ್ ಗಳು ಜೂನಿಯರ್ ಆದ ನೀವು ಸೀನಿಯರ್ ಆದ ನಮಗೆ ರೆಸ್ಪೆಕ್ಟ್ ಕೊಡಬೇಕೆಂದು, ಅಸಭ್ಯ ಭಾಷೆ ಬಳಸಿ ಗದರಿಸಿದ್ದಾರೆ. ಇದಾದ ಬಳಿಕ ರಾತ್ರಿ ವಿದ್ಯಾರ್ಥಿ ಉಳಿದುಕೊಂಡಿದ್ದ ಅತ್ತಾವರದ ಕಿಂಗ್ಸ್ ಕೋರ್ಟ್ ಅಪಾರ್ಟ್ ಮೆಂಟ್ ಮಾರಕಾಯುಧಗಳೊಂದಿಗೆ ಅಕ್ರಮ ಪ್ರವೇಶ ಮಾಡಿ, ಗದರಿಸಿ ಅರೆನಗ್ನಗೊಳಿಸಿ ಅಸಭ್ಯ ಭಾಷೆ ಬಳಸಿ ರ್ಯಾಗಿಂಗ್ ಮಾಡಿ ಹಲ್ಲೆ ನಡೆಸಿದ್ದು, ಇದಲ್ಲದೆ ಲಿಮ್ಸ್ ಎಂಬಾತ ಕಾಲೇಜಿನಲ್ಲಿ ನಮ್ಮನ್ನು ಕಂಡ ಕೂಡಲೇ ತಲೆ ಬಗ್ಗಿಸಬೇಕು ಇಲ್ಲವಾದರೆ ಕೊಲೆ ಮಾಡುವುದಾಗಿ ಜೀವಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತ ವಿದ್ಯಾರ್ಥಿ ದೂರಿನಲ್ಲಿ ತಿಳಿಸಿದ್ದು, ಈ ಬಗ್ಗೆ ನಾನು ಕಾಲೇಜಿನ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಇಮ್ಮು ಮುಂದೆ ಇಂತಹ ಘಟನೆಗಳು ನಡೆಯದಂತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ" ಎಂದರು.
ಇನ್ನು ಜು.21ರಂದು ಬಕ್ರೀದ್ ಹಬ್ಬ ಆಚರಿಸುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮತ್ತು ಮುಂಜಾಗರೂಕತಾ ಕ್ರಮವಾಗಿ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ 25ಕ್ಕೂ ಅಧಿಕ ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದ್ದು, ಕಮಿಷನರೇಟ್ ವ್ಯಾಪ್ತಿಯ ಪ್ರತಿಯೊಂದು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲದೆ ಉಡುಪಿ ಮತ್ತು ಕಾಸರಗೋಡು ಜಿಲ್ಲಾ ಗಡಿ ಭಾಗಗಳಲ್ಲಿ ಕೂಡಾ ಚೆಕ್ ಪೋಸ್ಟ್ ತೆರೆದು ಶಾಂತಿಯುತವಾಗಿ ಬಕ್ರೀದ್ ಆಚರಿಸಲು ವ್ಯವಸ್ಥೆ ಕಲ್ಪಿಸಲಾಗುವುದು" ಎಂದಿದ್ದಾರೆ.
"ಕಾಸರಗೋಡು ಮತ್ತು ಕೇರಳದಿಂದ ಅನೇಕ ಮಂದಿ ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ಮಂಗಳೂರಿಗೆ ಬರುತ್ತಿರುವುದರಿಂದ ಅವರೆಲ್ಲರ ಕೊರೊನಾ ನೆಗೆಟಿವ್ ವರದಿ ಕಡ್ಡಾಯವಾಗಬೇಕೆಂಬುದು ಜಿಲ್ಲಾಡಳಿತದ ಸೂಚನೆಯಾಗಿದ್ದು, ಕೊರೊನಾ ಲಸಿಕೆ ಮೊದಲನೆಯ ಡೋಸ್ ಆಗದಿದ್ದವರು ಕಡ್ಡಾಯಾವಾಗಿ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಬೇಕು" ಎಂದು ಮನವಿ ಮಾಡಿದ್ದಾರೆ.