ಕಡಬ, ಜು 17 (DaijiworldNews/MS): ತಾಲೂಕಿನ ನೆಲ್ಯಾಡಿ ನಿವಾಸಿಗಳಾಗಿದ್ದ ಕೃಷಿಕ ದಂಪತಿಗಳು ಕೋವಿಡ್ ಸೋಂಕಿಗೆ ತುತ್ತಾಗಿ ಒಂದೇ ದಿನ ಸಾವನ್ನಪ್ಪಿದ್ದಾರೆ.
ಮೃತರನ್ನು ನೆಲ್ಯಾಡಿಯ ನಿವಾಸಿ ಹಾಗೂ ಬೆಳ್ತಂಗಡಿ ತಾಲೂಕಿನ ಮುಂಡಜೆಯಲ್ಲಿರುವ ಸೇಂಟ್ ಮೇರಿಸ್ ಚರ್ಚ್ನ ಪ್ಯಾರಿಷ್ ಪಾದ್ರಿಯ ಪೋಷಕರಾಗಿರುವ ಪಿ.ವಿ ವರ್ಗೀಸ್ (74) ಹಾಗೂ ಮೇರಿ ವರ್ಗೀಸ್ (73) ಎಂದು ಗುರುತಿಸಲಾಗಿದೆ.
ಜೂನ್ 25ರಂದು ಅವರಿಗೆ ಜ್ವರ ಕಾಣಿಸಿಕೊಂಡಿದ್ದು ಔಷಧಿ ತೆಗೆದುಕೊಂಡ ನಂತರ ಇಬ್ಬರೂ ಚೇತರಿಸಿಕೊಂಡಿದ್ದರು. ಇದಾದ ಬಳಿಕ ಮತ್ತೆ ಇಬ್ಬರಲ್ಲೂ ಜ್ವರ ಕಾಣಿಸಿಕೊಂಡು ಉಲ್ಬಣಿಸಿ ಜುಲೈ 4ರಂದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ವೇಳೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ ಜು.೧೫ ರ ಮಧ್ಯಾಹ್ನ 3 ಗಂಟೆಗೆ ಮೇರಿ ನಿಧನರಾಗಿದ್ದು ಕೆಲವು ಗಂಟೆಗಳ ನಂತರ, ಅವರ ಪತಿ ವರ್ಗೀಸ್ ಸಂಜೆ 6.30 ರ ಸುಮಾರಿಗೆ ಸಾವನ್ನಪ್ಪಿದರು.
ದಂಪತಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಕೊವಿಡ್ -19 ಮಾರ್ಗಸೂಚಿ ಪ್ರಕಾರ ಶುಕ್ರವಾರ ಬೆಳಿಗ್ಗೆ ನೆಲ್ಯಾಡಿಯ ಸೇಂಟ್ ಅಲ್ಫೋನ್ಸಸ್ ಚರ್ಚ್ ಸ್ಮಶಾನದಲ್ಲಿ ಅಂತಿಮ ವಿಧಿಗಳನ್ನು ನಡೆಸಲಾಯಿತು.