ಸುಬ್ರಹ್ಮಣ್ಯ, ಜು 17 (DaijiworldNews/MS): ಮಾಜಿ ಪ್ರಿಯಕರನ ವಿರುದ್ಧ ನವವಿವಾಹಿತೆಯೊಬ್ಬರು ಅತ್ಯಾಚಾರ ಅಪಹರಣ ಹಾಗೂ ವಂಚನೆ ಪ್ರಕರಣ ದಾಖಲಿಸಿದ ಘಟನೆ ನಡೆದಿದೆ. ಆರೋಪಿ ವಿಜೇಶ್ ವಿರುದ್ಧ ಸುಬ್ರಹ್ಮಣ್ಯ ಪೊಲೀಸರಿಗೆ ದೂರು ದಾಖಲಾಗಿದೆ.
ಪುತ್ತೂರು ತಾಲೂಕಿನ ಸುಳ್ಯಪದವಿನ 26 ವರ್ಷದ ವಿವಾಹಿತ ಮಹಿಳೆ ದೂರುದಾರರು. ನವವಿವಾಹಿತೆ ಮತ್ತು ಸುಳ್ಯದ ವಿಜೇಶ್ ಹಿಂದೆ ಪರಸ್ಪರ ಪ್ರೀತಿಸುತ್ತಿದ್ದರು 2016ನೇ ನವೆಂಬರ್ ನಲ್ಲಿ ಪುತ್ತೂರಿಗೆ ಕೆಲಸಕ್ಕೆ ಹೋಗಿದ್ದ ಯುವತಿಯನ್ನು ಚಹಾ ಕುಡಿಯಲು ಆಹ್ವಾನಿಸಿ ಆರೋಪಿತ ಬಳಿಕ ಒತ್ತಾಯಪೂರ್ವಕವಾಗಿ ಕಾರ್ ನಲ್ಲಿ ಸುರತ್ಕಲ್ ಲಾಡ್ಜ್ ವೊಂದಕ್ಕೆ ಕರೆದುಕೊಂಡು ಹೋಗಿ ಬಲತ್ಕಾರವಾಗಿ ದೈಹಿಕ ಸಂಪರ್ಕ ನಡೆಸಿದ್ದಲ್ಲದೆ ಅವಳೊಂದಿಗೆ ಖಾಸಗಿ ಚಿತ್ರಗಳನ್ನು ತೆಗೆದು ಇರಿಸಿಕೊಂಡಿದ್ದ. ಬಳಿಕ ಆತ ಉದ್ಯೋಗ ನಿಮಿತ್ತ ವಿದೇಶಕ್ಕೆ ಹೋಗಿದ್ದ.
ಯುವತಿ 2021ರ ಮೇ ತಿಂಗಳಲ್ಲಿ ಬೇರೆ ವ್ಯಕ್ತಿ ಜೊತೆ ಮದುವೆಯಾಗಿದ್ದರಿಂದ ಮಾಜಿ ಪ್ರಿಯಕರ ವಿದೇಶದಲ್ಲಿರುವ ವಿಜೇಶ್ ಆಕೆಯ ಪತಿಗೆ ಚಿತ್ರಗಳನ್ನು ಕಳುಹಿಸಿದ್ದ. ಈ ಹಿಂದೆ ತೆಗೆದಿದ್ದ ನಗ್ನ ಫೊಟೋವನ್ನು ಆಕೆಯ ಗಂಡನಿಗೆ ಕಳುಹಿಸಿದ ಕಾರಣ ಗಂಡ ವಿಚ್ಛೇದನಕ್ಕೆ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ವಿವಾಹಿತ ಮಹಿಳೆ ನೀಡಿದ ದೂರಿನಂತೆ ಆರೋಪಿ ವಿಜೇಶ್ ವಿರುದ್ಧ ಸುಬ್ರಹ್ಮಣ್ಯ ಠಾಣೆಯಲ್ಲಿ ಯುವತಿಯ ಅಪಹರಣ, ಅತ್ಯಾಚಾರ ಹಾಗೂ ವಂಚನೆ ಪ್ರಕರಣ ದಾಖಲಾಗಿದೆ.