ಮಂಗಳೂರು, ಜು 17 (DaijiworldNews/MS): ಪಿಲ್ಲರ್ ಜಗ್ಗಿ ಬಿರುಕು ಬಿಟ್ಟು ವಾಹನ ಸಂಚಾರ ನಿರ್ಬಂಧಿಸಲ್ಪಟ್ಟಿರುವ ವಿಮಾನ ನಿಲ್ದಾಣ ವನ್ನು ಸಂಪರ್ಕಿಸುವ ಮುಖ್ಯ ರಸ್ತೆಯ ಮರವೂರು ಸೇತುವೆಯ ಪಿಲ್ಲರ್, ಸ್ಲ್ಯಾಬ್ ಅನ್ನು ಮೇಲಕ್ಕೆತ್ತುವ , ದುರಸ್ತಿ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದ್ದು ಜು.14 ರ ಶುಕ್ರವಾರ ಸೇತುವೆಯನ್ನು ಯಥಾ ಸ್ಥಿತಿಗೆ ತರಲಾಗಿದೆ. ಉಳಿದ ಸುರಕ್ಷಾ ಕ್ರಮಗಳನ್ನು 2 ವಾರದೊಳಗೆ ಮುಗಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ನಿರೀಕ್ಷೆ ಇದೆ.
ಕರಾವಳಿಯಲ್ಲ್ಲಿ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಫಲ್ಗುಣಿ ನದಿಯಲ್ಲಿ ಪ್ರವಾಹದ ಮಟ್ಟ ಏರಿಕೆಯಾಗಿದೆ. ಸೇತುವೆ ಬಿರುಕು ಬಿಟ್ಟಿರುವ ಪಿಲ್ಲರ್ ಭಾಗದಲ್ಲಿ ನದಿ ತಳದಿಂದ ಜ್ಯಾಕ್ ಮಾದರಿಯಲ್ಲಿ ಆಧಾರ ಕೊಡಲಾಗುತ್ತಿದೆ. ಪ್ರವಾಹದ ಪರಿಸ್ಥಿತಿಯಲ್ಲೂ ಬೆಂಗಳೂರು ಮತ್ತು ಕೇರಳದ ತಂತ್ರಜ್ಞರ ಸಲಹೆ ಪಡೆದು ಅತ್ಯಾಧುನಿಕ ಯಂತ್ರೋಪಕರಣಗಳ ಮೂಲಕ ಸ್ಲ್ಯಾಬ್ ಮೇಲಕ್ಕೆತ್ತುವ ಕಾಮಗಾರಿ ಗುರುವಾರ ರಾತ್ರಿ ಆರಂಭವಾಗಿದ್ದು ಶುಕ್ರವಾರ ಮಧ್ಯಾಹ್ನ ಪೂರ್ಣಗೊಂಡಿದೆ
ಲೋಕೋಪಯೋಗಿ ಇಲಾಖೆಯ ಮಂಗಳೂರು ವಿಭಾಗವು ಗುತ್ತಿಗೆದಾರ ಸಂಸ್ಥೆ ಮುಗ್ರೋಡಿ ಕನ್ಸ್ಟ್ರಕ್ಷನ್ಸ್ನ ಮೂಲಕ ಕಾಮಗಾರಿಯನ್ನು ನಿರ್ವಹಿಸಿದೆ ಎಂದು ಪಿಡಬ್ಯು ಡಿ ಅಧಿಕಾರಿಗಳು ತಿಳಿಸಿದ್ದಾರೆ. ಪಿಲ್ಲರ್ ಭದ್ರತೆಯ ಬಳಿಕ ಕ್ಯೂರಿಂಗ್ ಕಾರ್ಯ ಆಗಬೇಕಾಗಿದೆ. 2 ವಾರಗಳಲ್ಲಿ ಇನ್ನುಳಿದ ಸುರಕ್ಷಾ ಕ್ರಮಗಳನ್ನು ನಿರ್ವಹಿಸಿ ಲೋಡ್ ಟೆಸ್ಟಿಂಗ್ ಮಾಡಿ ದೃಢಪಡಿಸಿಕೊಂಡ ಬಳಿಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಪಿಡಬ್ಯು ಡಿ ಅಧಿಕಾರಿಗಳು ತಿಳಿಸಿದ್ದಾರೆ.
ಫಲ್ಗುಣಿ ನದಿಗೆ 54 ವರ್ಷಗಳ ಹಿಂದೆ ನಿರ್ಮಿಸಿದ್ದ ಸೇತುವೆಯ ಕೊನೆಯ ಪಿಲ್ಲರ್ ಜೂನ್ 15ರ ಮುಂಜಾನೆ 2.50 ಅಡಿಗಳಷ್ಟು ಜಗ್ಗಿದ ಪರಿಣಾಮ ಸೇತುವೆ ಬಿರುಕು ಬಿಟ್ಟಿತ್ತು. ಒಂದು ತಿಂಗಳಿನಿಂದ ಇಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.