ಉಡುಪಿ,ಜು. 16 (DaijiworldNews/SM): ತಂದೆಯನ್ನು ಕಳೆದುಕೊಂಡು ಅಸಹಾಯಕ ಪರಿಸ್ಥಿತಿಯಲ್ಲಿದ್ದ ಮೂವರು ಮಕ್ಕಳನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಮಕ್ಕಳ ರಕ್ಷಣಾ ಇಲಾಖೆಯ ಸುಪರ್ದಿಗೆ ಒಪ್ಪಿಸಿದ ಘಟನೆ ಜುಲೈ 16ರಂದು ಶಿರ್ವ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಕಳೆದ ತಿಂಗಳು ಜೂ.27ರಂದು ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ತಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಕೂಲಿ ಮಾಡಿ ಮಕ್ಕಳ ವಿದ್ಯಾಭ್ಯಾಸ ಹಾಗೂ ಅವರನ್ನು ಸಲಹಲು ಹಡೆದವ್ವಗೆ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಈ ಹಿನ್ನೆಲೆ ವಿಶು ಶೆಟ್ಟಿಯವರಲ್ಲಿ ನೆರವಿಗಾಗಿ ಬಡ ಮಾತೆ ಮನವಿ ಮಾಡಿದ್ದರು. 14 ಮತ್ತು 10 ವರ್ಷದ ಇಬ್ಬರು ಬಾಲಕರು ಮತ್ತು 8 ವರ್ಷದ ಹೆಣ್ಣು ಮಗು ತಾಯಿಯೊಂದಿಗೆ ಅಸಾಹಾಯಕ ಸ್ಥಿತಿಯಲ್ಲಿ ಗುಡಿಸಲಿನಲ್ಲಿ ವಾಸವಿದ್ದ ಮಕ್ಕಳನ್ನು ಕಂಡು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿಯವರ ಮನಸ್ಸು ಕರಗಿದೆ.
ಮಕ್ಕಳ ಅಸಹಾಯಕತೆ ಕಂಡ ವಿಶು ಶೆಟ್ಟಿ, ಮೃತರ ಅಂತ್ಯ ಸಂಸ್ಕಾರ ನಡೆಸಿ ಮಕ್ಕಳಿಗೆ ನೆರವಾಗಿದ್ದರು. ಮಕ್ಕಳ ರಕ್ಷಣೆ ಬಗ್ಗೆ ಇಲಾಖೆ ಗಮನ ಹರಿಸಬೇಕೆಂದು ವಿಶು ಶೆಟ್ಟಿ ಮಾಧ್ಯಮದ ಮೂಲಕ ಇಲಾಖೆಗೆ ಆಗ್ರಹಿಸಿದ್ದರೂ, ಇಲಾಖೆಯಿಂದ ಸ್ಪಂದನೆ ಸಿಕ್ಕಿರಲಿಲ್ಲ. ತಾಯಿ ಮಕ್ಕಳ ಅಸಹಾಯಕ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದ ವಿಶು ಶೆಟ್ಟಿ ಮಕ್ಕಳು ಮತ್ತು ಅವರ ತಾಯಿಗೆ ಧೈರ್ಯ ತುಂಬಿದ್ದಾರೆ. ಮಕ್ಕಳನ್ನು ವಶಕ್ಕೆ ಪಡೆದ ವಿಶು ಶೆಟ್ಟಿ ಕೊರೋನಾ ಪರೀಕ್ಷೆ ಮಾಡಿ ಮಕ್ಕಳ ರಕ್ಷಣಾ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಮೂರು ಮಕ್ಕಳಿಗೆ ಕಾನೂನು ಪ್ರಕ್ರಿಯೆ ನಡೆಸಿ, ಆಶ್ರಯ ಕಲ್ಪಿಸಿದ್ದಾರೆ.
ಮಕ್ಕಳ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ ಸಹಕರಿಸಿದ್ದಾರೆ.