ಉಡುಪಿ, ಜು. 16 (DaijiworldNews/SM): ವಿಶಾಲಾ ಗಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಪೊಲೀಸರು ಸುಮಾರು 10 ಮಂದಿ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಒಂದು ಅಥವಾ ಎರಡು ದಿನದೊಳಗೆ ಪ್ರಕರಣದ ಸಂಪೂರ್ಣ ವಿವರವನ್ನು ಪಡೆಯಲಾಗುವುದು ಎಂಬುವುದಾಗಿ ದೈಜಿವರ್ಲ್ಡ್ಗೆ ಉಡುಪಿ ಎಸ್ಪಿ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ. ಈಗಾಗಲೇ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಎಲ್ಲಾ ನಾಲ್ಕು ತಂಡಗಳು ಫೀಲ್ಡ್ ವರ್ಕ್ ಮಾಡುತ್ತಿವೆ. ಅಪರಾಧಿಯನ್ನು ಪತ್ತೆಹಚ್ಚಲು ಒಂದು ತಂಡ ಬೆಂಗಳೂರಿಗೆ ಹೋಗಿತ್ತು. ಫೋನ್ ಕರೆ ದಾಖಲೆಗಳು, ಇತರ ಕೆಲವು ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಭಾಗಿಯಾಗಿರುವ ವ್ಯಕ್ತಿಗಳ ಬಗ್ಗೆ ಪೊಲೀಸ್ ತಂಡಗಳು ಕೂಲಂಕಷವಾಗಿ ತನಿಖೆ ನಡೆಸಿವೆ. ಪೊಲೀಸ್ ತಂಡಗಳು ಈಗ ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ತೊಡಗಿಕೊಂಡಿವೆ ಎಂದು ಎಸ್ಪಿ ವಿಷ್ಣುವರ್ಧನ್ ಅವರು ದೈಜಿವರ್ಲ್ಡ್ ಗೆ ಮಾಹಿತಿ ನೀಡಿದ್ದಾರೆ.
ಇನ್ನು ಈಗಾಗಲೇ ಫ್ಲಾಟ್ ಮೇಲ್ವಿಚಾರಕ, ಆಟೋ ಡ್ರೈವರ್ ಹಾಗೂ ಕುಟುಂಬ ಸದಸ್ಯರನ್ನು ಈಗಾಗಲೇ ವಿಚಾರಣೆ ನಡೆಸಲಾಗಿದೆ. 10ಕ್ಕೂ ಹೆಚ್ಚು ವ್ಯಕ್ತಿಗಳನ್ನು ವಿಚಾರಿಸಲಾಗಿದ್ದು, ಒಂದೆರಡು ದಿನಗಳಲ್ಲಿ ಸಂಪೂರ್ಣ ಮಾಹಿತಿ ಪೊಲೀಸರು ಸಂಗ್ರಹಿಸಿ ಆರೋಪಿಗಳನ್ನು ಪತ್ತೆ ಹಚ್ಚುವ ಸಾಧ್ಯತೆ ಇದೆ.