ಉಡುಪಿ, ಜು 16 (DaijiworldNews/PY): "ಉತ್ತರ ಪ್ರದೇಶದಲ್ಲಿ ಸರಕಾರ ಜನಸಂಖ್ಯೆ ನಿಯಂತ್ರಣಕ್ಕೆ ತರಲು ಉದ್ದೇಶಿಸಿರುವ ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ರಾಜ್ಯದಲ್ಲಿಯೂ ಜಾರಿಗೊಳಿಸುವಂತೆ ಮುಂದಿನ ಅಧಿವೇಶನದಲ್ಲಿ ಸರಕಾರ ಹಾಗೂ ಸಿಎಂ ಅವರನ್ನು ಒತ್ತಾಯಿಸಲಾಗುತ್ತದೆ. ಒಂದು ಕುಟುಂಬ ಎರಡು ಮಕ್ಕಳ ನೀತಿ ಪಾಲಿಸಿಕೊಂಡರೆ ನಾವು ಜಗತ್ತಿಗೆ ಮಾನವ ಸಂಪನ್ಮೂಲಗಳನ್ನು ಒದಗಿಸುವ ಫ್ಯಾಕ್ಟರಿಯಾಗಿ ಭಾರತವನ್ನು ರೂಪಿಸಬಹುದು" ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದರು.
ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಮತ್ತು ಉಡುಪಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಗರದ ಪ್ರಗತಿ ಸೌಧದಲ್ಲಿ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಮತ್ತು ಮಲೇರಿಯಾ, ಡೆಂಗ್ಯೂ ವಿರೋಧಿ ಮಾಸಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
"ಉತ್ತರ ಪ್ರದೇಶ, ಅಸ್ಸಾಂನಲ್ಲಿ ಜಾರಿಗೆ ತರಲು ಉದ್ದೇಶಿಸಿದ ಈ ಮಸೂದೆಯಲ್ಲಿ ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಪಡೆದಲ್ಲಿ ಅವರಿಗೆ ಸರಕಾರದಿಂದ ಯಾವುದೇ ಯೋಜನೆಗಳು ಹಾಗೂ ಸವಲತ್ತುಗಳು ಇರುವುದಿಲ್ಲ. ಇದು ಸಮಾನ ನಾಗರಿಕ ಸಂಹಿತೆಗೆ ಹತ್ತಿರವಾದ ಹಾಗೂ ಒಳ್ಳೆಯ ಕಾನೂನು ರಾಜ್ಯದಲ್ಲೂ ಜಾರಿಗೆ ಬರಬೇಕು. 2ಕ್ಕಿಂತ ಹೆಚ್ಚು ಮಕ್ಕಳು ಹೊಂದದೆ ಜನಸಂಖ್ಯೆ ನಿಯಂತ್ರಣ ಮಾಡುವ ಬಗ್ಗೆ ಸಂಕಲ್ಪ ಮಾಡುವ ಮೂಲಕ ಎಲ್ಲರಿಗೂ ಸಮಾನವಾದ ಜನಸಂಖ್ಯೆ ನಿಯಂತ್ರಣ ಕಾನೂನು ತರಬೇಕು" ಎಂದು ಶಾಸಕರು ಅಭಿಪ್ರಾಯಪಟ್ಟರು.
"ಯುವ ಜನತೆಯ ಸಂಖ್ಯೆಯಲ್ಲಿ ಭಾರತ ಇಡೀ ಜಗತ್ತಿನಲ್ಲಿಯೇ ಮುಂಚೂಣಿಯಲ್ಲಿದೆ. ಸರಕಾರದ ಈಗಾಗಲೇ ಮಾಡಿರುವ ‘ಒಂದು ಬೇಕು, ಎರಡು ಸಾಕು’ ಎಂಬ ನೀತಿಯಿಂದಲೇ ನಮಗೆ ಬೇಕಾದಷ್ಟು ಮಾನವ ಸಂಪನ್ಮೂಲ ದೊರೆಯುತ್ತದೆ. ಒಂದು ಕುಟುಂಬದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳು ಇರುವುದರಿಂದ ಅಸಮತೋಲನ ಉಂಟಾಗಿ ಆರ್ಥಿಕ ಸಮಸ್ಯೆ ಎದುರಾಗಲಿದೆ" ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ ರಾಮ್ ರಾವ್ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಾಧಿಕಾರಿ ಡಾ ಪ್ರಶಾಂತ್ ಭಟ್ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ, ವಿಶೇಷ ಮಾಹಿತಿಯನ್ನು ನೀಡಿದರು.
ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಸದಸ್ಯ ಹರೀಶ್ ಶೆಟ್ಟಿ, ಆರೋಗ್ಯಾಧಿಕಾರಿ ಡಾ ನಾಗಭೂಷಣ ಉಡುಪ, ಧರ್ಮಸ್ಥಳ ಯೋಜನೆಯ ಕರಾವಳಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ತಾಲೂಕು ವೈದ್ಯಧಿಕಾರಿ ವಾಸುದೇವ್ ಭಟ್ ಉಪಸ್ಥಿತರಿದ್ದರು.