ಕೋಟಾ, ಜು 16 (DaijiworldNews/MS): ಬ್ರಹ್ಮಾವರದ ಕುಮ್ರಗೋಡು ,ಉಪ್ಪಿನಕೋಟೆ ಸಮೀಪದ ಕರನ್ ಅಪಾರ್ಟ್ಮೆಂಟ್ನ 3ನೇ ಮಹಡಿಯಲ್ಲಿ ಕೊಲೆಯಾದ ವಿಶಾಲಾ ಗಾಣಿಗ ಕೊಲೆ ಪ್ರಕರಣದ ತನಿಖೆಯಾಗಿ ನಾಲ್ಕು ದಿನ ಕಳೆದಿದ್ದು ಪ್ರಕರಣ ನಿಗೂಢವಾಗಿಯೇ ಉಳಿದಿದೆ.
ಕೊಲೆಯಾದ ದಿನ ಸೋಮವಾರ ತನ್ನ ತಂದೆ ತಾಯಿ ಹಾಗೂ 6 ವರ್ಷದ ಮಗುವಿನೊಂದಿಗೆ ಆಟೋವೊಂದರಲ್ಲಿ ಗಂಗೊಳ್ಳಿ ಸಮೀಪದ ನಾಯಕವಾಡಿಯ ಮನೆಗೆ ತೆರಳಿದ್ದರು. ಅಲ್ಲಿ ತಂದೆ, ತಾಯಿ ಹಾಗೂ ಮಗುವನ್ನು ಬಿಟ್ಟು ಬ್ಯಾಂಕ್ಗೆ ಹೋಗಿ ಬರುತ್ತೇನೆಂದು ಅದೇ ಆಟೋದಲ್ಲಿ ಹಿಂದಕ್ಕೆ ಬಂದಿದ್ದರು. ಹೀಗಾಗಿ ಆಪ್ತರು ಯಾವುದೋ ಕೆಲಸ ನಿಮಿತ್ತ ಪ್ಲ್ಯಾಟ್ ಗೆ ಬರುವಂತೆ ತಿಳಿಸಿದ್ದು ಅದಕ್ಕಾಗಿ ಅವರು ಮನೆಯಿಂದ ವಾಪಸಾಗಿರಬಹುದು ಎನ್ನುವ ಅನುಮಾನಗಳಿವೆ.
ಪ್ಲ್ಯಾಟ್ ಗೆ ಬಂದವನಿಗೆ ಟೀ ಮಾಡಿಕೊಟ್ಟು ಮಾತುಕತೆ ನಡೆಸಿರುವ ಸಾಧ್ಯತೆ ಇದ್ದು ಭೇಟಿಯಾಗಲು ಬಂದ ವ್ಯಕ್ತಿಯಿಂದಲೇ ಕೊಲೆ ನಡೆದಿರುವ ಸಾಧ್ಯತೆ ಇದೆ.
ಪ್ರಕರಣಕ್ಕೆ ಸಂಬಂಧಿಸಿ ಫೋನ್ ಕಾಲ್ ಗಳು, ಫ್ಲಾಟ್ ವ್ಯಾಪ್ತಿಯೊಳಗಿನ ನೆಟ್ವರ್ಕ್, ಸ್ಥಳೀಯ ಪ್ರದೇಶದ ಸಿಸಿಟಿವಿ ಫೂಟೇಜ್, ಹೀಗೆ ಎಲ್ಲವನ್ನು ಸಂಗ್ರಹಿಸಲಾಗುತ್ತಿದೆ.ಪರಿಚಿತರಿಂದಲೇ ಕೊಲೆ ನಡೆದಿರಬಹುದು ಎನ್ನುವ ಅನುಮಾನಕ್ಕೆ 2 ಟೀ ಕುಡಿದ ಕಪ್ ಗಳು ಮಾತ್ರ ಸಾಕ್ಷಿಯಾಗಿದೆ. ಟೀ ಕುಡಿದ ಮೇಲೆ ತೊಳೆದಿಟ್ಟಿದ್ದು ಪ್ರಕರಣ ಬೆಳಕಿಗೆ ಬಂದಾಗ ತೊಳೆದಿಟ್ಟ ಕಪ್ ನಲ್ಲಿ ನೀರಿನ ಅಂಶ ಆರಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಇದು ಕೊಲೆಯ ಸಂದರ್ಭದಲ್ಲಿ ಮಾಡಿಕೊಟ್ಟ ಟೀ ಕಪ್ ಗಳಾಗಿರಬಹುದು. ಒಂದು ವೇಳೆ ಬೆಳಗ್ಗೆ ಅಪ್ಪ - ಅಮ್ಮ ಬಂದಾಗಿನ ಟೀ ಕುಡಿದ ಕಪ್ ಆಗಿದ್ದರೆ ನೀರಿನ ತೇವಾಂಶ ಆರಿರುತ್ತಿತ್ತು ಎಂದು ಅಂದಾಜಿಸಲಾಗಿದೆ. ಮಾತ್ರವಲ್ಲದೆ ವಿಶಾಲ ಅವರು ಅಪರಿಚಿತರನ್ನು ಮನೆಯೊಳಗೆ ಸೇರಿಸುತ್ತಿರಲಿಲ್ಲ, ಗಂಡನ ಸ್ನೇಹಿತರು ಮನೆಗೆ ಬಂದರೂ ಗಂಡನಿಗೆ ವೀಡಿಯೋ ಕಾಲ್ ಮಾಡಿ ಖಚಿತಪಡಿಸಿಕೊಂಡ ಮೇಲೆ ಒಳಗೆ ಕರೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಪರಿಚಿತರಿಂದಲೇ ಈ ಕೃತ್ಯ ನಡೆದಿರಬಹುದು ಎನ್ನುವ ಸಂಶಯವಿದೆ. ಆದರೆ ಘಟನೆ ನಡೆದ ಅಪಾರ್ಟ್ಮೆಂಟ್ ಅಲ್ಲಿ ಸಿಸಿಟಿವಿ ಇಲ್ಲದಿರುವುದು ಪ್ರಕರಣದ ತನಿಖೆಗೆ ಹಿನ್ನಡೆಯಾಗಿದೆ.
ಇನ್ನು ವಿಶಾಲ ಅವರ ಮೃತದೇಹವನ್ನು ಬುಧವಾರ ಬಿಜೂರಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದ್ದು ಪತಿ ರಾಮಕೃಷ್ಣ ಗಾಣಿಗ ಭಾಗವಹಿಸಿದ್ದರು ಪೊಲೀಸರು ರಾಮಕೃಷ್ಣ ಗಾಣಿಗ ಅವರನ್ನು ವಿಚಾರಣೆ ನಡೆಸಿ ಹಲವಾರು ಮಾಹಿತಿಗಳನ್ನು ಪಡೆದಿದ್ದಾರೆ ಎನ್ನಲಾಗಿದೆ.