ಕುಂದಾಪುರ, ಜು 16 (DaijiworldNews/MS): ಬೆಂಗಳೂರು-ಮಂಗಳೂರು ವಿಸ್ಟಾಡೋಮ್ ಹಗಲು ರೈಲು ಸಂಚಾರ ಹೊಸ ಸಂಚಲನವನ್ನುಂಟು ಮಾಡಿದೆ. ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಈ ರೈಲು ಸೆಳೆಯಲಿದೆ. ಆದರೆ ಬೆಂಗಳೂರಿನಿಂದ ವಿಸ್ಟೋಡೋಮ್ ಪ್ರವಾಸಿ ರೈಲನ್ನು ಮಂಗಳೂರಿಗೆ ಮಾತ್ರ ಸೀಮಿತಗೊಳಿಸಿರುವುದು ಉಡುಪಿ, ಉತ್ತರ ಕನ್ನಡ ಜಿಲ್ಲೆಯವರನ್ನು ಕೆರಳಿಸಿದೆ.
ಗಣೇಶ್ ಪುತ್ರನ್ - ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ
ಉಡುಪಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಉದ್ದಕ್ಕೂ ಸಾಕಷ್ಟು ರಮಣೀಯವಾದ ಪ್ರದೇಶಗಳಿವೆ. ಪ್ರವಾಸಿಗರನ್ನು ಸೆಳೆಯುವ ತಾಣಗಳಿವೆ ಅವುಗಳನ್ನೆಲ್ಲ ಪ್ರವಾಸಿಗರಿಂದ ದೂರ ಮಾಡುವ ಪ್ರಯತ್ನ ಆದಂತಿದೆ. ಈ ಭಾಗದಲ್ಲಿ ಪ್ರವಾಸೋದ್ಯಮ ಬೆಳೆಯಬೇಕು ಎನ್ನುವ ಕೂಗು ಕೇಳಿ ಬರುತ್ತಿರುವುದರ ನಡುವೆ ಜವಾಬ್ದಾರಿಯುತ ಇಲಾಖೆಗಳೇ ಹೀಗೆ ಮಾಡಿರುವುದು ಸರಿಯಲ್ಲ ಎಂದು ಸಾರ್ವಜನಿರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಈ ರೈಲನ್ನು ಕುಂದಾಪುರ ಕಾರವಾರಕ್ಕೂ ವಿಸ್ತರಿಸಬೇಕು ಎನ್ನುವ ಬೇಡಿಕೆ ವ್ಯಾಪಕವಾಗಿ ಕೇಳಿ ಬರುತ್ತಿದೆ. ಉಡುಪಿ ಕುಂದಾಪುರ, ಬೈಂದೂರು ಕಾರವಾರದವರೆಗೆ ಈ ವಿಸ್ಟಾಡೋಮ್ ರೈಲನ್ನು ಮುಂದುವರಿಸಿದರೆ ಪಂಚಗಂಗಾವಳಿ ನದಿ, ಗೋಕರ್ಣ, ಮುರ್ಡೇಶ್ವರ, ಕಡಲ ಕಿನಾರೆ ಒತ್ತಿನೆಣೆ ಗುಡ್ಡ ಸಹಿತ ಇನ್ನಿತರ ಪ್ರಾಕೃತಿಕ ಸೊಬಗನ್ನು ಸವಿಯುವ ಅವಕಾಶ ಪ್ರಯಾಣಿಕರಿಗೆ ಸಿಗುತ್ತದೆ. ಆದ್ದರಿಂದ ಈ ರೈಲು ಕಾರವಾರದವರೆಗೆ ಸಂಚರಿಸಬೇಕು ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಸಂಬಂಧಪಟ್ಟವರಿಗೆ ಮನವಿ ಮಾಡಿದೆ.
ಕರಾವಳಿ ಕರ್ನಾಟಕ ನಿರಂತರವಾಗಿ ರೈಲ್ವೆ ಇಲಾಖೆಯ ಶೋಷಣೆಗೆ ಒಳಗಾಗುತ್ತಿದೆ. ಅದರಲ್ಲೂ ಈ ಭಾಗಕ್ಕೆ ಸವಲತ್ತುಗಳನ್ನು ನೀಡಲು ಮೀನಮೇಷ ಎಣಿಸಲಾಗುತ್ತಿದೆ. ಹೋರಾಟ, ಪ್ರತಿಭಟನೆಯ ಮೂಲಕವೇ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದ ಅನಿವಾರ್ಯತೆ ಈ ಭಾಗಕ್ಕೆ ಬಂದಿದೆ. ಹಾಗಿರುವಾಗ ಈಗ ಇದ್ದ ರೈಲಿನ ಸೌಲಭ್ಯವನ್ನು ತಪ್ಪಿಸಿ, ಹೊಸ ರೈಲ್ವೆಯ ಅವಕಾಶವನ್ನೂ ಉಡುಪಿ ಜಿಲ್ಲೆಗೆ ನೀಡಿಲ್ಲದಿರುವುದು ಸಹಜವಾಗಿಯೇ ಬೇಸರಕ್ಕೆ ಕಾರಣವಾಗಿದೆ.
ನಿರಂತರವಾಗಿ ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಹೋರಾಟಗಳನ್ನು ಮಾಡಿಕೊಂಡು ಸೌಲಭ್ಯ ಪಡೆದುಕೊಳ್ಳುತ್ತಾ ಬರುತ್ತಿದ್ದು ವಿಸ್ಟೋಡೋಮ್ಗಾಗಿ ಇನ್ನೊಂದು ಹೋರಾಟಕ್ಕೆ ಇಳಿಯುವ ಸಂದರ್ಭ ಎದುರಾಗಿದೆ.
"ವಿಸ್ಟೋಡೋಮ್ ರೈಲು ಉತ್ತಮ ಯೋಜನೆ ಹಾಗೂ ಪ್ರವಾಸಿಗರನ್ನು ಉತ್ತೇಜಿಸಲು ಒಳ್ಳೆಯ ಯೋಚನೆಯಾಗಿದೆ. ಆದರೆ ಬೆಂಗಳೂರು ಕಾರವಾರ ನಡುವೆ ಓಡಾಡುತ್ತಿದ್ದ ಹಗಲು ರೈಲು ಇದಾಗಿದ್ದು ಅದನ್ನು ಮಂಗಳೂರಿಗಷ್ಟೇ ಸೀಮಿತಗೊಳಿಸಿರುವುದು ಮಾತ್ರ ಸರಿಯಲ್ಲ. ಕರಾವಳಿ ಕರ್ನಾಟಕ ಅನ್ಯಾಯ ಮಾಡುತ್ತಲೇ ಬಂದಿರುವ ಕೊಂಕಣ ರೈಲ್ವೇಯಿಂದಾಗಿಯೇ ಆ ರೈಲು ಈಗ ಉಡುಪಿ, ಉತ್ತರ ಕನ್ನಡ ಜಿಲ್ಲೆಗೆ ವಿಸ್ತರಣೆಯಾಗಿಲ್ಲ ತಪ್ಪನ್ನು ಸರಿಪಡಿಸಿ ಕುಂದಾಪುರ ಕಾರವಾರಕ್ಕೂ ನ್ಯಾಯ ಒದಗಿಸಬೇಕು ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದು" ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಗಣೇಶ್ ಪುತ್ರನ್ ಹೇಳಿದ್ದಾರೆ.