ಉಡುಪಿ, ಜು. 15 (DaijiworldNews/SM): ಕರಾವಳಿಯಲ್ಲಿ ಸಾಮರಸ್ಯಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದ್ದು, ಕ್ರೈಸ್ತ ಉದ್ಯಮಿಯೊಬ್ಬರು ತಮ್ಮದೇ ಜಮೀನಿನಲ್ಲಿ ದೇವಸ್ಥಾನವನ್ನು ನಿರ್ಮಿಸಿ ಸೌಹಾರ್ದತೆ ಮೆರೆದಿದ್ದಾರೆ. 77 ವರ್ಷದ ಕ್ರೈಸ್ತ ಉದ್ಯಮಿ ಗ್ಯಾಬ್ರಿಯಲ್ ನಜರೆತ್ ಅವರು ತಮ್ಮ ಸ್ವಂತ ಜಮೀನಿನಲ್ಲಿ ಶ್ರೀ ಸಿದ್ದಿ ವಿನಾಯಕ ದೇವಸ್ಥಾನ ನಿರ್ಮಿಸಿದ್ದು, ನೂತನ ದೇವಾಲಯ ಲೋಕಾರ್ಪಣೆಗೊಂಡಿದೆ.
ಪಲಿಮಾರು ಮಠಧೀಶರ ಮಾರ್ಗದರ್ಶನದಲ್ಲಿ ಜುಲೈ 14ರಿಂದಲೇ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಿದ್ದು, ಜುಲೈ 15ರಂದು ಸಿದ್ದಿವಿನಾಯಕನ ಪ್ರತಿಷ್ಟಾಪನೆ ಮತ್ತು ಅನ್ನಸಂತರ್ಪಣೆ ನಡೆಯಿತು. ಜುಲೈ 16 ರಂದು ಬ್ರಹ್ಮಕಲಶೋತ್ಸವ ಕೂಡಾ ನಡೆಯಿತು. ಸುಮಾರು 50 ವರ್ಷಕ್ಕೂ ಅಧಿಕ ಕಾಲ ಮುಂಬೈಯಲ್ಲಿ ದುಡಿದು ಸುಮಾರು 40 ವರ್ಷಗಳ ಕಾಲ ತಮ್ಮ ಸ್ವಂತ ಉದ್ದಿಮೆಯನ್ನು ನಡೆಸಿದ ಗೇಬ್ರಿಯಲ್ ನಜ್ರೆತ್ ಅವರು ಕಳೆದ ಕೆಲವು ವರ್ಷಗಳಿಂದ ತಮ ಹಿರಿಯರ ಜಾಗದಲ್ಲಿ ಮನೆ ಕಟ್ಟಿಕೊಂಡು ಜೀವನ ನಡೆಸುತಿದ್ದಾರೆ.
ಮುಂಬೈನಲ್ಲಿ ಉದ್ಯಮ ನಡೆಸುತಿದ್ದಾಗ ತಮ್ಮ ವರ್ಕ್ ಶಾಪ್ ನ ಪಕ್ಕದಲ್ಲೇ ಇದ್ದ ಸಿದ್ದಿವಿನಾಯಕನ ಅಪಾರ ಭಕ್ತಿಯನ್ನು ಹೊಂದಿದ್ದರು. ತಮ್ಮ ನಿವೃತ್ತ ಜೀವನದಲ್ಲಿ ಇರುವ ಕಾಲದಲ್ಲಿ ಗೇಬ್ರಿಯಲ್ ಅವರು ತಮ್ಮ ಹಿರಿಯರರಿಂದ ಬಳುವಳಿಯಾಗಿ ಬಂದಿದ್ದ ಆಸ್ತಿಯಲ್ಲಿ ೀಗ ಸುಮಾರು 2 ಕೋಟಿ ರುಪಾಯಿ ವೆಚ್ಚದಲ್ಲಿ ಭವ್ಯವಾದ ದೇಗುಲವನ್ನು ನಿರ್ಮಿಸಿದ್ದಾರೆ. ಈ ದೇಗುಲ ನಿರ್ಮಾಣಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಗೇಬ್ರಿಯಲ್ ಅವರೇ ಭರಿಸಿದ್ದು ಯಾರಿಂದಲೂ ವಂತಿಗೆಯನ್ನು ಸಂಗ್ರಹಿಸಿಲ್ಲ. ಗೇಬ್ರಿಯಲ್ ಅವರ ಕಾರ್ಯಕ್ಕೆ ಮೆಚ್ಚಿ ಇದೀಗ ಸಿದ್ದಿವಿನಾಯಕನ ಭಕ್ತರು ತಮ್ಮ ಹರಕೆ ಸೇವೆಯಾಗಿ ಗಂಟೆ, ದೀಪವನ್ನು ದಾನವಾಗಿ ನೀಡಲು ಮುಂದೆ ಬಂದಿದ್ದಾರೆ.
ಕೋಮು ಸೌಹಾರ್ದದಕ್ಕೆ ಹೆಸರುವಾಸಿಯಾದ ಶಿರ್ವದಲ್ಲಿ ಮಸೀದಿಯ ಮುಂದೆಯೇ ದೇವಸ್ಥಾನ ನಿರ್ಮಾಣವಾಗಿದೆ. ಕ್ರೈಸ್ತರೊಬ್ಬರು ಜಾಗ ನೀಡಿ ದೇವಾಲಯವನ್ನೇ ಕಟ್ಟಿಸಿಕೊಟ್ಟಿದ್ದಾರೆ. ಕೋಮು ಸೌಹಾರ್ದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಮತ್ತೊಂದಿಲ್ಲ.