ಸುಳ್ಯ, ಜು. 15 (DaijiworldNews/SM): ಸುಳ್ಯದ ಜಯನಗರ ಸಮೀಪ ಕ್ರಿಕೆಟ್ ಆಟದ ವಿಚಾರದಲ್ಲಿ ನಡೆದಿರುವ ವಾಗ್ವಾದ ಹಾಗೂ ವೀಡಿಯೋ ವೈರಲ್ ವಿಚಾರ ಇದೀಗ ಸುಖಾಂತ್ಯಗೊಂಡಿದ್ದು, ಈ ನಡುವೆ, ಯುವಕರನ್ನು ತರಾಟೆಗೆತ್ತಿಕೊಂಡಿದ್ದ ವ್ಯಕ್ತಿ ಪ್ರವೀಣ್ ಕ್ಷಮೆಯಾಚಿಸಿದ್ದಾರೆ.
ನಾನು ಎರಡು ಧರ್ಮದ ಪದ ಬಳಕೆ ಮಾಡಿದ್ದೇನೆ. ಇದರಿಂದ ಬೇಸರವಾಗಿದ್ದಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ. ಜುಲೈ 10ರ ಶನಿವಾರದಂದು ಕ್ರಿಕೆಟ್ ತಾಲೂಕಿನ ಜನನಗರ ದೈವಸ್ಥಾನದ ಆವರಣದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರನ್ನು ತರಾಟೇಗೆತ್ತಿಕೊಂಡಿದ್ದೆ. ಮಾತನಾಡುವ ಸಂದರ್ಭದಲ್ಲಿ ಎರಡು ಧರ್ಮಗಳ ಬಗ್ಗೆ ಉಲ್ಲೇಖಿಸಿದ್ದೇನೆ. ನನಗೆ ಯಾವುದೇ ಧರ್ಮದ ವಿರುದ್ಧ ಧ್ವೇಶವಿಲ್ಲ. ಎಲ್ಲಾ ಧರ್ಮದವರೊಂದಿಗೆ ನಾನು ಆತ್ಮೀಯವಾಗಿದ್ದೇನೆ. ನನ್ನ ಮಾತುಗಳಿಂದ ನೇವಾಗಿದ್ದರೆ, ಕ್ಷಮೆ ಇರಲಿ ಎಂದು ಅವರು ಹೇಳಿದ್ದಾರೆ.
ಪ್ರಕರಣ ಏನು?
ಸುಳ್ಯದ ಜಯನಗರ ಸಮೀಪದ ಕೊರಂಬಡ್ಕ ಆದಿಮೊಗೆರ್ಕಳ ದೈವಸ್ಥಾನದಲ್ಲಿ ಕ್ರಿಕೆಟ್ ಆಡುತ್ತಿದ್ದದ್ದಕ್ಕೆ ಸಂಬಂಧಿಸಿ ವಿರೋಧ ವ್ಯಕ್ತಪಡಿಸಿದ ಕುರಿತ ವೀಡಿಯೋ ಒಂದು ವೈರಲ್ ಆಗಿತ್ತು. ದೈವಸ್ಥಾನಕ್ಕೆ ಸಂಬಂಧಿಸಿದ ಜಾಗದಲ್ಲಿ ಗಿಡ ನೆಡಲು ಆಡಳಿತ ಮಂಡಳಿ ನಿರ್ಧರಿಸಿತ್ತು. ಅದಕ್ಕಾಗಿ ಅಲ್ಲಿ ಗುಂಡಿ ತೆಗೆಯಲಾಗಿತ್ತು. ಇದರಿಂದ ಕ್ರಿಕೆಟ್ ಆಡಲು ಆಗಲ್ಲ ಎಂಬ ಕಾರಣಕ್ಕೆ ಸ್ಥಳೀಯ ಕೆಲ ಯುವಕರು ಆಡಳಿತ ಮಂಡಳಿಯವರ ಕ್ರಮ ಸರಿಯಲ್ಲ ಎಂದು ಹೇಳಿದ್ದರು.
ದೈವಸ್ಥಾನದ ಆವರಣದಲ್ಲಿ ಕ್ರಿಕಟ್ ಆಡಲು ಅವಕಾಶವಿಲ್ಲ ಎಂದದ್ದಕ್ಕೆ ನಾವೂ ಹಿಂದುಗಳು ಎಂದು ಯುವಕರು ಮರು ಉತ್ತರಿಸಿದ್ದಾರೆ. ಬಳಿಕ ಅಲ್ಲಿದ್ದ ಅನ್ಯ ಧರ್ಮದ ಯುವಕನೊಬ್ಬನನ್ನು ಹಿಂದಕ್ಕೆ ಕಳುಹಿಸಲಾಗಿತ್ತು. ಬಳಿಕ ಯುವಕರು ಠಾಣೆ ಮೆಟ್ಟಿಲೇರಿದ್ದರು. ದೈವಸ್ಥಾನದ ಆವರಣದಲ್ಲಿ ಕ್ರಿಕೆಟ್ ಆಡುವ ಕ್ರಮ ಸರಿಯಲ್ಲ ಎಂಬ ಕುರಿತು ಮೊದಲೇ ಸಾರ್ವಜನಿಕವಾಗಿ ನಿರ್ಧಾರವಾಗಿದ್ದರೂ ಆಟ ಆಡಿದ್ದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದು ಬಿಟ್ಟರೆ ಧರ್ಮ ದ್ವೇಷ ಬಿತ್ತುವ ಉದ್ದೇಶ ನಮಗಿರಲಿಲ್ಲ ಎಂದು ಪ್ರವೀಣ ಅವರು ಪೊಲೀಸ್ ಠಾಣೆಯಲ್ಲಿ ತಿಳಿಸಿದ್ದಾರೆ. ಸದ್ಯ ಮಾತುಕತೆಯಲ್ಲಿ ಈ ಪ್ರಕರಣ ಸುಖಾಂತ್ಯ ಕಂಡಿದೆ.