ಕಾರ್ಕಳ, ಜು. 15(DaijiworldNews/HR): ತಾಲೂಕು ಪ್ರಗತಿ ಹೊಂದಬೇಕಾದರೆ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಕಾಣಬೇಕು. ಅದಕ್ಕೆ ಪೂರಕವಾಗಿ ಮೂಲಸೌಕರ್ಯಗಳು, ವಾಣಿಜ್ಯ ಸಂಕೀರ್ಣಗಳು ಅವಶ್ಯಕತೆಯಾಗಿದೆ. ಪ್ರವಾಸಿಗರ ಅನುಕೂಲತೆಗಾಗಿ ಹಂತ ಹಂತವಾಗಿ ಬಜಗೋಳಿ ಪೇಟೆಯು ವಿಸ್ತಾರಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಹೆಸರಾಂತ ಮಳಿಗೆಗಳು ಕಾರ್ಯರಂಭಗೊಳ್ಳುವ ಮೂಲಕ ಇನ್ನಷ್ಟು ಪ್ರಸಿದ್ಧಿ ಹೊಂದಲಿದೆ. ಆ ಮೂಲಕ ಗ್ರಾಮ ಪಂಚಾಯತ್ ಗೆ ಇನ್ನಷ್ಟು ಅರ್ಥಿಕ ಕ್ರೋಡೀಕರಣಕ್ಕೆ ಸಾಧ್ಯವಾಗಲಿದೆ ಎಂದು ಶಾಸಕ ಹಾಗೂ ಸರಕಾರದ ಮುಖ್ಯ ಸಚೇತಕ ವಿ.ಸುನೀಲ್ಕುಮಾರ್ ಹೇಳಿದರು.
ಮುಡಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಜಗೋಳಿ ಪೇಟೆಯ ಮಾರ್ಕೆಟ್ ಮುಂಭಾಗದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಶಾಸಕರ ನಿಧಿ, ಗ್ರಾಮ ಪಂಚಾಯತ್ ನ ಒಟ್ಟು ರೂ.1ಕೋಟಿ ಅನುದಾನದಲ್ಲಿ ವಾಣಿಜ್ಯ ಸಂಕೀರ್ಣದ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಕಾರ್ಯದರ್ಶಿ ಪ್ರದೀಪ್ ಡಿಸೋಜಾ, ಜಿಲ್ಲಾ ಪಂಚಾಯತ್ ನಿಟಕಪೂರ್ವ ಸದಸ್ಯ ಉದಯ ಎಸ್.ಕೋಟ್ಯಾನ್, ಮುಡಾರು ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಶೆಟ್ಟಿ, ಉಪಾಧ್ಯಕೆ ಅಮ್ರತಾ ಪ್ರಭು, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ, ಉದ್ಯಮಿ ಉಮೇಶ್ ರಾವ್, ಗ್ರಾಮ ಪಂಚಾಯತ್ ಸದಸ್ಯರು ಮತ್ತಿತ್ತರರು ಉಪಸ್ಥಿತರಿದ್ದರು.