ಬಂಟ್ವಾಳ, ಜು 15 (DaijiworldNews/PY): ಪುರಸಭಾ ವ್ಯಾಪ್ತಿಯ ಎಲ್ಲಾ ವಸತಿ ಸಂಕೀರ್ಣಗಳಿಗೆ ಒಳಚರಂಡಿ ಸಂಸ್ಕರಣಾ ಘಟಕ ನಿರ್ಮಾಣವನ್ನು ಕಡ್ಡಾಯಗೊಳಿಸಿ ಬಂಟ್ವಾಳ ಪುರಸಭೆ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಂಡಿದೆ.
ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಿದ್ದು, ಅಧ್ಯಕ್ಷರ ಅನುಮತಿ ಮೇರೆಗಿನ ಚರ್ಚೆಯಲ್ಲಿ ಈ ವಿಚಾರ ಪ್ರಸ್ತಾಪಗೊಂಡು ಪಕ್ಷ ಬೇಧ ಮರೆತು ಸದಸ್ಯರು ಚರ್ಚೆ ನಡೆಸಿ ಕೊನೆಗೆ ಈ ಮೇಲಿನಂತೆ ತೀರ್ಮಾನ ಕೈಗೊಂಡು ಅಧ್ಯಕ್ಷರು ರೂಲಿಂಗ್ ಪ್ರಕಟಿಸಿದರು. ಮುಂದಿನ ಮೂರು ತಿಂಗಳ ಒಳಗೆ ಇದಕ್ಕೆ ಬದ್ಧರಾಗದ ಸಂಕೀರ್ಣಗಳ ವಿರುದ್ಧ ಕಠಿಣ ಕ್ರಮಕ್ಕೂ ಪುರಸಭೆ ನಿರ್ಣಯಿಸಿದ್ದು, ಈ ಸಂದರ್ಭದಲ್ಲಿ ಸದಸ್ಯರು ಯಾರು ಕೂಡ ಒತ್ತಡ ಹೇರದಂತೆಯು ಅಧ್ಯಕ್ಷರು ವಿನಂತಿಸಿದರು.
ಕೊಳಚೆ ನೀರು ನೇತ್ರಾವತಿ ಒಡಲಿಗೆ: ಕಳೆದ 8 ವರ್ಷಗಳಿಂದ ಒಳಚರಂಡಿ ಯೋಜನೆ ಕಂದಾಯ ಇಲಾಖೆಯ ಅಧಿಕಾರಿಗಳ ಅಸಹಕಾರದಿಂದ ನೆನೆಗುದಿಗೆ ಬಿದ್ದಿದ್ದು, ಕೋಟ್ಯಾಂತರ ಹಣ ನಷ್ಟವಾಗುತ್ತಿದೆ, ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಎಲ್ಲಾ ಕೊಳಚೆ ನೇತ್ರಾವತಿ ನದಿ ನೀರಿನ ಒಡಲು ಸೇರುತ್ತಿದೆ ಇದಕ್ಕೆ ಕೊನೆ ಯಾವಾಗ ಎಂದು ವಿಪಕ್ಷ ಸದಸ್ಯ ಗೋವಿಂದ ಪ್ರಭು ಪ್ರಶ್ನಿಸಿದರು. ಕಳೆದ ಮೂರು ವರ್ಷದಿಂದ ಸರಕಾರಿ ಜಮೀನು ತೋರಿಸುವಂತೆ ಕಂದಾಯ ಇಲಾಖೆಗೆ ಪತ್ರ ಬರೆದರೂ ಸ್ಪಂದನೆ ಸಿಗುತ್ತಿಲ್ಲ ಎಂದು ಪ್ರಭು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಸದಸ್ಯ ಲುಕ್ಮಾನ್ ಪುರಸಭಾ ವ್ಯಾಪ್ತಿಯ ಫ್ಲ್ಯಾಟ್ಗಳಲ್ಲಿ ಎಸ್ಟಿಪಿ ಅಳವಡಿಕೆಯ ಕುರಿತು ಕ್ರಮಕೈಗೊಳ್ಳದೇ ಇರುವ ಕುರಿತಾಗಿ ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್ರ ಗಮನ ಸೆಳೆದರು. ಈ ಪ್ರಸ್ತಾವಕ್ಕೆ ಎಲ್ಲಾ ಸದಸ್ಯರು ಬೆಂಬಲಿಸಿ, ಈ ಬಗ್ಗೆ ಕ್ರಮಕ್ಕೆ ಆಗ್ರಹಿಸಿದರು. ಆಗ ಈ ಕುರಿತಾಗಿ ನಿರ್ಣಯ ಕೈಗೊಂಡು, ಮೂರು ತಿಂಗಳ ಒಳಗೆ ಅಧಿಕಾರಿಗಳು ಅನುಷ್ಠಾನಕ್ಕೆ ತರಬೇಕು ಇಲ್ಲದಿದ್ದಲ್ಲಿ ಅಧಿಕಾರಿಗಳ ಮೇಲೆ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಬರೆಯಲಾಗುವುದು ಎಂದು ಸಭಾಧ್ಯಕ್ಷ ಶರೀಫ್ ಪ್ರಕಟಿಸಿದರು.
ಪುರಸಭೆಯ ಅನುದಾನ ಪಿಡಬ್ಲ್ಯೂಡಿಗೆ: ಪುರಸಭೆಗೆ ಮಂಜೂರಾದ ಅನುದಾನವನ್ನು ಪಿಡಬ್ಲ್ಯೂಡಿ ಇಲಾಖೆಗೆ ವರ್ಗಾಯಿಸಿ ಕಾಮಗಾರಿ ನಡೆಸುವ ಮೂಲಕ, ಬಂಟ್ವಾಳ ಶಾಸಕರು ಪುರಸಭೆಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದ ಘಟನೆಯೂ ನಡೆಯಿತು.
ಸ್ಥಳೀಯಾಡಳಿತ ಸಂಸ್ಥೆಗೆ ಮಂಜೂರಾದ ಅನುದಾನವನ್ನು ಅನ್ಯ ಇಲಾಖೆಗೆ ವರ್ಗಾಯಿಸಲು ಕಾನೂನಿನಲ್ಲಿ ಅವಕಾಶ ಇದೆಯೇ ಎಂದು ಲುಕ್ಮಾನ್ ಪ್ರಶ್ನಿಸಿದರು. ಪುರಸಭೆಯಲ್ಲಿ ಆಡಳಿತಾಧಿಕಾರಿ ನೇಮಕವಾಗಿದ್ದ ಸಂದರ್ಭ ಈ ಪ್ರಕ್ರಿಯೆ ನಡೆದಿದ್ದು, ಈ ಕುರಿತಾಗಿ ಜಿಲ್ಲಾಧಿಕಾರಿವರಿಗೆ ಪತ್ರ ಬರೆದು ವಿವರ ಪಡೆದುಕೊಳ್ಳುವುದಾಗಿ ಅಧ್ಯಕ್ಷ ಮಹಮ್ಮದ್ ಶರೀಫ್ ತಿಳಿಸಿದರು.
ಬಾಡಿಗೆ ವಿನಾಯಿತಿ ನೀಡಿ: ಕೊರೊನ ಮಹಾಮಾರಿಯ ಹಿನ್ನಲೆಯಲ್ಲಿ ಪುರಸಭಾ ವ್ಯಾಪ್ತಿಯಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಅಂಗಡಿ ಹೊಂದಿರುವವರ ಕನಿಷ್ಠ ಒಂದು ಬಾಡಿಗೆಗೆ ವಿನಾಯಿತಿ ನೀಡುವಂತೆ ಸದಸ್ಯ ವಾಸು ಪೂಜಾರಿ ಒತ್ತಾಯಿಸಿದರು. ಹಾಗೆಯೇ ಬಾರೆಕಾಡು ಆಶ್ರಯ ಕಾಲೊನಿಯಲ್ಲಿ 2000-01 ರಿಂದ ವಾಸ್ತವ್ಯವಿರುವ ಫಲಾನುಭವಿಗಳಿಗೆ ಇನ್ನು ಕೂಡ ಹಕ್ಕು ಪತ್ರ ವಿತರಿಸದ ಕುರಿತು ಗಮನ ಸೆಳೆದ ವಾಸುಪೂಜಾರಿ ಅವರು ಈ ಬಗ್ಗೆ ಇನ್ನಾದರೂ ಸೂಕ್ತ ನಿರ್ಣಯ ಕೈಗೊಂಡು ಹಕ್ಕುಪತ್ರ ವಿತರಿಸುಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಬಂಧಿತ ಅಧಿಕಾರಿ ಉಮಾವತಿ, ಮನೆ ನಿರ್ಮಿಸಿಕೊಡುವ ಸಂದರ್ಭ ಕೆಲ ಲೋಪಗಳು ಅಗಿರುವುದರಿಂದ ಸಮಸ್ಯೆಯಾಗಿದೆ.ಆಶ್ರಯ ಸಮಿತಿಯಲ್ಲಿ ಈಗಾಗಲೇ ತೀರ್ಮಾನವೊಂದನ್ನು ತೆಗೆದುಕೊಂಡಿದೆ ಎಂದರು.
ಡಿ.ಸಿ.ಬಳಿ ನಿಯೋಗ: ಪ.ಜಾತಿಗೆ ಸಂಬಂಧಿಸಿದ ಕಾಲೊನಿಗೆ ಮೂಲ ಭೂತ ಸೌಲಭ್ಯ ಒದಗಿಸುವುದು, ಪುರಸಭೆಯಲ್ಲಿ ಪೂರ್ಣಪ್ರಮಾಣದ ಪರಿಸರಾಧಿಕಾರಿ, ಆರೋಗ್ಯ ನಿರೀಕ್ಷಕರನ್ನು ನೇಮಕಗೊಳಿಸುವುದು, ಪುರಸಭೆಯ ಕಡತಗಳಿಗೆ ಆಡಳಿತಾತ್ಮಕ ಮಂಜೂರಾತಿ ಕೊಡುವಲ್ಲಿ ಜಿಲ್ಲಾಡಳಿತದಿಂದ ವಿಳಂಬ ಸಹಿತ ವಿವಿಧ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ ಬಳಿ ಸದಸ್ಯರ ನಿಯೋಗ ಹೋಗಿ ಚರ್ಚಿಸಬೇಕು ಎಂದು ಸದಸ್ಯರಾದ ಜನಾರ್ದನ ಚಂಡ್ತಿಮಾರ್, ವಾಸು ಪೂಜಾರಿ ಆಗ್ರಹಿಸಿದರು.
ತ್ಯಾಜ್ಯ ಎಸೆಯುವ ಆಯ ಕಟ್ಟಿನ ಸ್ಥಳದಲ್ಲಿ ಸಿಸಿ ಕ್ಯಾಮರ ಅಳವಡಿಸುವ ಕುರಿತು ಸದಸ್ಯ ರಾಮಕೃಷ್ಣ ಆಳ್ವ ಪ್ರಸ್ತಾವಿಸಿದಾಗ, ಈ ಬಗ್ಗೆ ಜಿಲ್ಲಾಡಳಿತದಿಂದ ಇನ್ನೂ ಆಡಳಿತಾತ್ಮಕ ಮಂಜೂರಾತಿ ದೊರೆತಿಲ್ಲ ಎಂದು ಅಧ್ಯಕ್ಷರು ಸಭೆಯ ಗಮನಕ್ಕೆ ತಂದರು. ಈ ಸಂದರ್ಭ ಮಧ್ಯಪ್ರವೇಶಿಸಿದ ಗೋವಿಂದ ಪ್ರಭು, ಬಂಟ್ವಾಳ ಪುರಸಭೆಯ ವಿಚಾರದಲ್ಲಿ ಯೋಜನಾ ನಿದೇಶಕರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ತಿಂಗಳ ಬಳಿಕ ಟೆಂಡರ್ ಪ್ರಕಟಣೆ: ಪುರಸಭಾ ಕಚೇರಿ ಸಿಸಿ ಕ್ಯಾಮಾರದ ಸೊತ್ತೊಂದನ್ನು ಖರೀದಿಸಿದ ಬಳಿಕ ಇದರ ಟೆಂಡರ್ ಕುರಿತು ತಿಂಗಳ ನಂತರ ಪತ್ರಿಕೆಯೊಂದರಲ್ಲಿ ಜಾಹೀರಾತು ಪ್ರಕಟಿಸಿರುವುದನ್ನು ಸದಸ್ಯ ಗೋವಿಂದ ಪ್ರಭು ಗಮನಸೆಳೆದು ಆಡಳಿತ ಕಾರ್ಯವೈಖರಿ ಬಗ್ಗೆ ಬೊಟ್ಟು ಮಾಡಿದರು. ತನ್ನ ಸದಸ್ಯತ್ವದ 35 ವರ್ಷದ ಅನುಭವದಲ್ಲೇ ಈ ರೀತಿಯ ಸೊತ್ತು ಖರೀದಿಸಿದ ಬಳಿಕ ಟೆಂಡರ್ ಪ್ರಕಟಣೆ ನೀಡುವುದನ್ನುಆಡಳಿತ ವ್ಯವಸ್ಥೆಯಲ್ಲೆ ನೋಡಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು. ಇದಕ್ಕೆ ಅಧ್ಯಕ್ಷರು ಸಮಜಾಯಿಷಿ ನೀಡಿದರು.
ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಸದಸ್ಯರಾದ ರಾಮಕೃಷ್ಣ ಆಳ್ವ, ಗಂಗಾಧರ ಪೂಜಾರಿ, ಮಹಮ್ಮದ್ ನಂದರಬೆಟ್ಟು, ಮೊನೀಶ್ ಆಲಿ, ಹರಿಪ್ರಸಾದ್, ವಿದ್ಯಾವತಿ, ಲೋಲಾಕ್ಷ, ಸಿದ್ದಿಕ್ ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು.
ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ , ಬೂಡಾ ಸದಸ್ಯ ಕಾರ್ಯದರ್ಶಿ ಅಭಿಲಾಷ್, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಸಿಬ್ಬಂದಿ ರಜಾಕ್, ಮೆನೇಜರ್ ಲೀಲಾವತಿ ಮೊದಲಾದವರಿದ್ದರು.