ಉಡುಪಿ, ಜು 15 (DaijiworldNews/PY): "ಉಡುಪಿ ಜಿಲ್ಲಾಧಿಕಾರಿಯವರು ಉದ್ದೇಶಪೂರ್ವಕವಾಗಿ ಮತ್ತು ಯಾವುದೋ ರಾಜಕೀಯ ಒತ್ತಡಕ್ಕೆ ಮಣಿದು ಉಡುಪಿ ಜಿಲ್ಲಾಮಟ್ಟದ ಸ್ಥಳೀಯ ದೂರು ಸಮಿತಿಯ ಸದಸ್ಯ ಪಟ್ಟಿಯಲ್ಲಿದ್ದ ನನ್ನ ಹೆಸರನ್ನು ತೆಗಿದಿದ್ದು, ನನಗೆ ಮಾನನಷ್ಟವಾಗಿದೆ. ಸದ್ಯ ಡಿಸಿಯವರ ಸೂಕ್ತ ಪ್ರತಿಕ್ರಿಯೆಗೆ ಕಾಯುತ್ತಿದ್ದೇನೆ. ಒಂದು ವೇಳೆ ಏನೂ ಪ್ರತಿಕ್ರಿಯೆ ಬಂದಿಲ್ಲವಾದರೆ, ಅಂತ ಸಂದರ್ಭ ಬಂದಾಗ ಕೋರ್ಟ್ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ಮಾಡುತ್ತೇನೆ, ನನ್ನ ಸಾಮಾಜಿಕ ಬದುಕಿಗೆ, ಗೌರವಕ್ಕೆ ಧಕ್ಕೆಯಾಗಿದೆ. ಇಂತಹ ಅನ್ಯಾಯ ಇನ್ಯಾರಿಗೂ ಆಗಬಾರದು ಎಂಬುದು ನನ್ನ ಕಳಕಳಿ" ಎಂದು ವಕೀಲೆ ಸಹನಾ ಕುಂದರ್ ಸೂಡ ಎಚ್ಚರಿಕೆ ಕೊಟ್ಟಿದ್ದಾರೆ.
ಇಂದು ಉಡುಪಿ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ಜಿಲ್ಲಾಧಿಕಾರಿಯವರ ಬಗ್ಗೆ ದೂರುಗಳನ್ನು ಬಹಳಷ್ಟು ಕೇಳಿದ್ದೆ. ಆದರೆ ನನಗೂ ಅನುಭವಕ್ಕೆ ಬಂತು. ಹಣ ಇರುವ, ಪ್ರಭಾವ ಇರುವವರು ಮಾತ್ರ ಇಲ್ಲಿ ಗೆಲುವು ಪಡೆಯುತ್ತಾರೆ. ಜಿಲ್ಲಾಧಿಕಾರಿಯವರಿಗೆ ದುರ್ನಡತೆ ಮತ್ತು ಅಹಂಕಾರವಿದೆ. ಜನರು ಇದಕ್ಕೆ ಸರಿಯಾದ ಉತ್ತರ ಕೊಡಬೇಕು. ಈಗಾಗಲೇ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಗೆ ದೂರು ಸಲ್ಲಿಸಲಾಗಿದೆ" ಎಂದಿದ್ದಾರೆ.
"ನಾನು ಸಮಾಜದಲ್ಲಿ ಗುರುತಿಸಿಕೊಂಡ ಕಾರಣ ಈ ವಿಷಯವನ್ನು ಸಮಿತಿಯ ಆಯ್ಕೆ ಪ್ರಕ್ರಿಯೆ ಬಗ್ಗೆ ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಈ ಬಗ್ಗೆ ನಾನು ಜಿಲ್ಲಾಧಿಕಾರಿಗಳ ಬಳಿಯೇ ಚರ್ಚಿಸಬೇಕು ಎಂದು ಭೇಟಿಯಾದಾಗ ಅವರು ಸರಿಯಾದ ರೀತಿಯಲ್ಲಿ ಉತ್ತರಿಸದೆ "ಫೈಲ್ಗಳ ನಡುವೆ ಈ ನೋಟಿಸ್ಗೆ ಗೊತ್ತಾಗದೆ ಸಹಿ ಮಾಡಿದೆ. ಪೋಲಿಸ್ ಪರಿಶೀಲನೆ ಆಗಿ ಸಹಿ ಮಾಡಬೇಕಿತ್ತು. ಸದ್ಯಕ್ಕೆ ಮತ್ತೆ ಸಮಿತಿ ರಚನೆ, ಆದಾಗ ನಿಮ್ಮ ಹೆಸರು ಇರಲುಬಹುದು? ಇಲ್ಲದೇನು ಇರಬಹುದು? ಎಂದು ಅಸಡ್ಡೆಯಾಗಿ ಉತ್ತರಿಸಿದರು. ಸಾರ್ವಜನಿಕರಿಗೆ ಏನು ಹೇಳಲಿ ಎಂದು ಕೇಳಿದಾಗ ನಾನು ಸಹಿ ಮಾಡಿದ್ದೆ. ಈಗ ತೆಗೆದೆ” ಎಂದು ಉದ್ಧಟತನದಿಂದ ಉತ್ತರ ನೀಡಿದ್ದಾರೆ" ಎಂದು ತಿಳಿಸಿದ್ದಾರೆ.
"ಉಡುಪಿ ಜಿಲ್ಲಾಮಟ್ಟದ ಸ್ಥಳೀಯ ದೂರು ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿ ಪ್ರಮಾಣೀಕರಿಸಿದ ಪ್ರತಿ, ಈ ದೂರು ಸಮಿತಿಗೆ ಸದಸ್ಯರಾಗಲು ಇರಬೇಕಾದ ಅರ್ಹತೆಗಳು, ಸಮಿತಿ ಅಧ್ಯಕ್ಷರು ಮತ್ತು ಸದಸ್ಯರುಗಳ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? ನನ್ನ ಹೆಸರನ್ನು ಯಾವ ಕಾನೂನು ಅಥವಾ ಕಾಯ್ದೆಯ ಮೇಲೆ ತೆಗೆದುಹಾಕಿದ್ದೀರಿ ಎಂಬ ಸ್ಪಷ್ಟ ಮಾಹಿತಿ ಕೋರಿ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯಲಾಗಿದೆ" ಎಂದು ತಿಳಿಸಿದ್ದಾರೆ.
"ದೂರು ಸಮಿತಿಯ ಸದಸ್ಯೆಯಾಗಲು ನಾನು ಯಾವುದೇ ರೀತಿಯ ವಿನಂತಿ ಪತ್ರ ನೀಡಿಲ್ಲ. ಯಾರ ಪ್ರಭಾವವನ್ನು ಕೂಡಾ ಬಳಸಿಕೊಂಡಿಲ್ಲ , ಏಕಾಏಕಿ ಜಿಲ್ಲಾಧಿಕಾರಿ ತೆಗೆದುಕೊಂಡ ಈ ನಿರ್ಧಾರದ ಹಿಂದೆ ರಾಜಕೀಯ ಕೈವಾಡವಿದೆ. ಒಂದೋ ನನಗೆ ಆ ಸತ್ಯವನ್ನು ಜಿಲ್ಲಾಧಿಕಾರಿ ತಿಳಿಸಲಿ, ಇಲ್ಲವಾದರೆ ನನ್ನನ್ನು ಸಮಿತಿಯನ್ನು ಕೈ ಬಿಟ್ಟ ಬಗ್ಗೆ ಸೂಕ್ತ ಕಾರಣದ ಜೊತೆಗೆ ಆದೇಶ ಪ್ರತಿಯನ್ನು ಹೊರಡಿಸಲಿ" ಎಂದು ವಕೀಲೆ ಸಹನಾ ಜಿಲ್ಲಾಧಿಕಾರಿ ಮೇಲೆ ಸವಾಲು ಹಾಕಿದ್ದಾರೆ.