ಬಂಟ್ವಾಳ, ಜು 15 (DaijiworldNews/MS): ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಸುರಿಯುವ ಮಳೆಯ ಕಾರಣ ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆಯಾಗಿದ್ದು ಇಂದು ಬೆಳಿಗ್ಗೆ ನೀರಿನ 6.4 ಮೀ. ಆಗಿದೆ ಎಂದು ತಾಲೂಕು ಆಡಳಿತ ಮಾಹಿತಿ ನೀಡಿದೆ.
ಘಟ್ಟ ಪ್ರದೇಶ ಸಹಿತ ಎಲ್ಲಾ ಕಡೆಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಕಳೆದ ಎರಡು ದಿನಗಳಿಂದ ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದೆ.
ನೇತ್ರಾವತಿ ನದಿಯ ನೀರಿನ ಮಟ್ಟ 8.5 ತಲುಪಿದರೆ ಅಪಾಯದ ಮಟ್ಟವಾಗಿದೆ.ಮಳೆಯ ಆರ್ಭಟ ಜೋರಾಗಿರುವ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯ ನೀರಿನ ಮಟ್ಟ ಏರಿಕೆ ಕಾಣುವ ಲಕ್ಷಣಗಳು ಇವೆ.ಇದೇ ರೀತಿ ಮಳೆ ಮುಂದುವರಿದು ನೇತ್ರಾವತಿ ನದಿ ನೀರಿನ ಮಟ್ಟದಲ್ಲಿ ಹೆಚ್ಚಳ ಕಂಡರೆ ಪಾಣೆಮಂಗಳೂರು, ಜಕ್ರಿಬೆಟ್ಟು, ಆಲಡ್ಕ, ಕಂಚಿಕಾರ ಪೇಟೆ ಸಹಿತ ಅನೇಕ ತಗ್ಗುಪ್ರದೇಶಗಳು ಜಲಾವೃತಗೊಳ್ಳುತ್ತದೆ.ಸದ್ಯ ಅಂತಹ ಯಾವುದೇ ಅಪಾಯದ ಲಕ್ಷಣಗಳು ಗೋಚರಿಸುತ್ತಿಲ್ಲ.
ಎ.ಎಮ್.ಆರ್.ಹಾಗೂ ಎಂ.ಆರ್.ಪಿ.ಎಲ್. ಡ್ಯಾಂನಲ್ಲಿ ಮಳೆ ನೀರು ಶೇಖರಣೆ ಮಾಡುತ್ತಿದ್ದು ಅವರು ಕಂಪೆನಿಯ ಉದ್ದೇಶಕ್ಕೆ ನೀರು ಶೇಖರಣೆ ಭರ್ತಿಯಾದ ಬಳಿಕ ಹೊರ ಹರಿಯಲು ಬಿಟ್ಟರೆ ನದಿ ನೀರಿನ ಮಟ್ಟ ಏರಿಕೆಯಾಗುವ ಸಂಭವಗಳು ಹೆಚ್ಚು.
ತಾಲೂಕು ಆಡಳಿತ ಸಿದ್ದ
ಬಂಟ್ವಾಳ ನೇತ್ರಾವತಿ ನದಿ ನೀರಿನ ಅಪಾಯದ ಮಟ್ಟ 8.5 ಆಗಿದ್ದು ಸದ್ಯ ಅಂತಹ ಯಾವುದೇ ರೀತಿಯ ಅಪಾಯದ ಲಕ್ಷಣಗಳು ಕಾಣುತ್ತಿಲ್ಲ.ಮಳೆ ಹೆಚ್ಚಾಗಿ ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆಯಾಗಿ ಅಪಾಯದ ಮಟ್ಟ ಮುಟ್ಟಿದರೆ ಪರಿಸ್ಥಿತಿ ನಿಭಾಯಿಸಲು ತಾಲೂಕು ಆಡಳಿತ ಸನ್ನದ್ಧ ವಾಗಿದೆ.ಈಗಾಗಲೇ ಸಂಪೂರ್ಣ ವ್ಯವಸ್ಥೆ ಗಳನ್ನು ಸಿದ್ದಗೊಳಿಸಲಾಗಿದ್ದು, ಹೋಮ್ ಗಾರ್ಡ್ ಹಾಗೂ ಬೋಟ್ ತಯಾರಾಗಿದೆ.
ಎಲ್ಲಾ ಅಧಿಕಾರಿಗಳು ತಾಲೂಕಿನಲ್ಲಿ ಇದ್ದು ಯಾವುದೇ ಸಂದರ್ಭದಲ್ಲಿಯೂ ಪರಿಸ್ಥಿತಿ ನಿಭಾಯಿಸಲು ತಯಾರಾಗಿದ್ದಾರೆ ಎಂದು ಬಂಟ್ವಾಳ ತಹಶಿಲ್ದಾರ್ ರಶ್ಮಿ. ಎಸ್. ಆರ್.ಅವರು ತಿಳಿಸಿದ್ದಾರೆ.