ಕುಂದಾಪುರ, ಜು 15 (DaijiworldNews/MS): ಕೊಂಕಣ ರೈಲ್ವೆ ವಿಭಾಗೀಯ ಅಧಿಕಾರಿ ಬಿಬಿ ನಿಕ್ಕಮ್ ಬುಧವಾರ ಮೂಡ್ಲಕಟ್ಟೆಯ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳೊಂದಿಗೆ ವಿವಿಧ ಕುಂದುಕೊರತೆಗಳ ಕುರಿತು ಚರ್ಚಿಸಿದರು.
ಕುಂದಾಪುರದಲ್ಲಿ ಪ್ರಯಾಣಿಕರ ಗಣಕೀಕೃತ ಸೀಟು ಕಾದಿರಿಸುವಿಕೆ, ನಿಲ್ದಾಣದ ದುರಸ್ತಿ ಕಾರ್ಯ, ಮಿಸ್ಟಾಡೋಮ್ ಪ್ರವಾಸಿ ರೈಲು ಕಾರವಾರದವರೆಗೆ ವಿಸ್ತರಣೆ, ನಿಲ್ದಾಣದಲ್ಲಿ ಹೈಮಾಸ್ಕ್ ದೀಪದ ಅಳವಡಿಕೆ, ನೇತ್ರಾವತಿ ನಿಲುಗಡೆ ಮತ್ತು ಬೆಂಗಳೂರು - ಕಾರವಾರ ರೈಲು ಮತ್ತೆ ಆರಂಭಿಸಬೇಕು ಎನ್ನುವ ಬೇಡಿಕೆ ವ್ಯಕ್ತವಾಯಿತು.
ಹೈಮಾಸ್ಕ್ ದೀಪವನ್ನು ಕೂಡಲೇ ಅಳವಡಿಸಲು ನಿಕ್ಕಮ್ ಅವರು ಸ್ಥಳದಲ್ಲಿ ಸೂಚಿಸಿದರು. ಇನ್ನಿತರ ವಿಚಾರಗಳ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಸಮಿತಿಗೆ ಭರವಸೆ ನೀಡಿದರು.
ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ಕಾರ್ಯದರ್ಶಿ ಪ್ರವೀಣ್ ಕುಮಾರ್, ತಾಂತ್ರಿಕ ಸಲಹೆಗಾರ ಗೌತಮ್ ಶೆಟ್ಟಿ , ಕೋಶಾಧಿಕಾರಿ ಉದಯ್ ಭಂಡಾರ್ಕರ್ ಗೌರವಾಧ್ಯಕ್ಷರಾದ ಕೆಂಚನೂರು ಸೋಮಶೇಖರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.