ಮಂಗಳೂರು, ಜು 15 (DaijiworldNews/PY): ಹಲ್ಲೆ, ಜೀವ ಬೆದರಿಕೆ ಪ್ರಕರಣದಲ್ಲಿ ಭಾಗಿಯಾಗಿ 16 ವರ್ಷ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಜ್ಪೆ ಪೊಲೀಸರು ಮುಂಬೈಯಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮುಲ್ಕಿ ನಿವಾಸಿ, ಸದ್ಯ ಮುಂಬೈನ ಸಕಿ ನಾಕಾದಲ್ಲಿ ವಾಸವಿರುವ ಚಂದ್ರಕಾಂತ ಪೂಜಾರಿ ಯಾನೆ ಅಣ್ಣು (55) ಎಂದು ಗುರುತಿಸಲಾಗಿದೆ.
ಬಜ್ಪೆ ವ್ಯಾಪ್ತಿಯ ಪೆರ್ಮುದೆ ಗ್ರಾಮದಲ್ಲಿ 2005ರ ಜನವರಿ 10ರಂದು ರಾತ್ರಿ ವಿಶ್ವನಾಥ್ ಅಮೀನ್ ಎನ್ನುವವರ ಮನೆಗೆ ಅಕ್ರಮವಾಗಿ ಆರೋಪಿಗಳು ಪ್ರವೇಶಿಸಿದ್ದು, ಈ ವೇಳೆ ಮನೆಯವರಿಗೆ ತೀವ್ರವಾಗಿ ಹಲ್ಲೆ ನಡೆಸಿದ್ದರು. ಅಲ್ಲದೇ, ಜೀವ ಬೆದರಿಕೆ ಹಾಕಿದ್ದರು. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ಪಿಎಸ್ಐ ಧಮೇಂದ್ರ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿ ಯೋಗೀಶ್ ಎಂಬಾತನನ್ನು ಬಂಧಿಸಿದ್ದರು. ಈ ಸಂದರ್ಭ ಚಂದ್ರಕಾಂತ ಪರಾರಿಯಾಗಿದ್ದ.
ಎಲ್ಪಿಸಿ ಪ್ರಕರಣದ ಆರೋಪಿ ಚಂದ್ರಕಾಂತ್ ಮುಂಬೈಯಲ್ಲಿ ಇರುವುದಾಗಿ ಸುಳಿವು ಸಿಕ್ಕಿದ್ದು, ಮಾಹಿತಿ ಮೇರೆಗೆ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಲು ತೆರಳಿದ್ದರು. ಈ ವೇಳೆ ಆರೋಪಿ ಮುಂಬೈನ ಅಂಧೇರಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿರುವುದು ಪತ್ತೆಯಾಗಿದೆ. ಈ ಸಂದರ್ಭ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮುಂಬೈನಲ್ಲಿಯೂ ಆರೋಪಿ ಚಂದ್ರಕಾಂತ್ ವಿರುದ್ದ ಹೊಡೆದಾಟ ಪ್ರಕರಣ ದಾಖಲಾಗಿದೆ. ಚಂದ್ರಕಾಂತ್ನ ಸಹೋದರ ವಾಸುದೇವ ಯಾನೆ ವಾಮನ ಎಂಬಾತ ಛೋಟಾ ರಾಜನ್ನ ಸಹಚರನಾಗಿದ್ದ. 2004ರಲ್ಲಿ ಈತನನ್ನು ಪೊಲೀಸರು ಎನ್ಕೌಂಟರ್ ಮಾಡಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರ ನಿರ್ದೇಶನದಲ್ಲಿ ಡಿಸಿಪಿಗಳಾದ ಹರಿರಾಮ್ ಶಂಕರ್, ದಿನೇಶ್ ಕುಮಾರ್ ಬಾರಿಕೆ, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮಹೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಲ್ಪೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ., ಪಿಎಸ್ಐ ಪೂವಪ್ಪ, ಎಎಸ್ಐ ರಾಮ ಪೂಜಾರಿ, ಸಿಬ್ಬಂದಿಗಳಾದ ರಶೀದ್ ಶೇಕ್, ಲಕ್ಷ್ಮಣ ಕಾಂಬ್ಳೆ, ಸಂತೋಷ ಡಿ.ಕೆ., ವಕೀಲ ಎನ್. ಲಮಾಣಿ ಪಾಲ್ಗೊಂಡಿದ್ದರು.